ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಮುಂಗಾರು ಚುರುಕುಗೊಂಡಿದ್ದು ಮಳೆ ಬಿರುಸಿನಿಂದ ಸುರಿಯಿತು. ನಗರದ ಹಲವು ಕಡೆ ಮರಗಳು ಉರುಳಿ ಬಿದ್ದಿವೆ.
ನಗರದ ಕಾನ್ವೆಂಟ್ ಜಂಕ್ಷನ್ ಬಳಿ ಬ್ಯೂಟಿ ಪಾರ್ಲರ್ ಮೇಲೆ ಮರ ಬಿದ್ದು ಚಾವಣಿ ಜಖಂ ಗೊಂಡಿದೆ. ಮರವು ವಿದ್ಯುತ್ ತಂತಿ ಮೇಲೆ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಜ್ಯೋತಿ ನಗರದ ಕೆಲವೆಡೆ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡುವ ಸ್ಥಿತಿ ಉಂಟಾಗಿತ್ತು. `ಸೆಸ್ಕ್~ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.
ಜಿಲ್ಲೆಯಲ್ಲಿ ಮಳೆಯ ವಿವರ: ಮಡಿಕೇರಿಯಲ್ಲಿ 13 ಮಿ.ಮೀ., ವೀರಾಜಪೇಟೆ 30.4, ಸೋಮವಾರಪೇಟೆ 10, ಭಾಗಮಂಡಲ 43.6, ಪೊನ್ನಪೇಟೆ 14 , ನಾಪೋಕ್ಲು 21 , ಶನಿವಾರಸಂತೆ 17.5 ಮಿ.ಮೀ. ಮಳೆಯಾಗಿದೆ.