ಮಡಿಕೇರಿ: ಕೊಡಗಿನಾದ್ಯಂತ ಮಂಗಳವಾರ ಕ್ರೈಸ್ತ್ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಮಡಿಕೇರಿಯ ಸಂತ ಮೈಕಲರ ಚರ್ಚ್, ಸಿಎಸ್ಐ, ಬಾಸೆಲ್ ಮಿಷನ್ ಚರ್ಚ್ಗಳಲ್ಲಿ ಬೆಳಿಗ್ಗೆಯಿಂದಲೇ ಪೂಜೆ, ಬೈಬಲ್ ಪಠಣ, ಸಾಮೂಹಿಕ ಗಾಯನಗಳು ನಡೆದವು. ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಚರ್ಚ್ಗೆ ಆಗಮಿಸಿ, ಏಸುವನ್ನು ಪ್ರಾರ್ಥಿಸಿದರು. ಕ್ರೈಸ್ತ್ ಬಾಂಧವರ ಮನೆಮನೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿತು. ಬೈಬಲ್ ಪಠಣ, ಗೀತ-ಗಾಯನಗಳು ನಡೆದವು. ನೆಂಟರಿಷ್ಟರಿಗೆ, ನೆರೆಹೊರೆಯವರಿಗೆ, ಸ್ನೇಹಿತರಿಗೆ ಕೇಕ್ ನೀಡಿ ಶುಭ ಕೋರಿದರು.
ಕುಶಾಲನಗರದಲ್ಲಿ ಸಂಭ್ರಮ
ಕುಶಾಲನಗರ: ಪಟ್ಟಣದಲ್ಲಿ ಮಂಗಳವಾರ ಕ್ರೈಸ್ತ ಧರ್ಮದವರು ಕ್ರಿಸ್ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಪಟ್ಟಣ ಹಾಗೂ ಸುತ್ತಲಿನ ಕೂಡಿಗೆ, ಸಿದ್ದಲಿಂಗಪುರ, ಸುಂಟಿಕೊಪ್ಪ ಹಾಗೂ ಏಳನೇ ಹೊಸಕೋಟೆ ಗ್ರಾಮಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಕುಶಾಲನಗರ ಪಟ್ಟಣದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರೈಸ್ತ ಬಾಂಧವರು ಹೊಸ ಉಡುಗೆ ಧರಿಸಿ ಸಂತ ಸಬಾಸ್ಟೀನರ ದೇವಾಲಯ ಮತ್ತು ಮೆಡ್ಲಾಕ್ ಚರ್ಚ್ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚರ್ಚ್ಅನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು. ಧರ್ಮಗುರು ಜೆಕಬ್ ಕೊಲ್ಲನೂರು ನೇತೃತ್ವದಲ್ಲಿ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಕೂಡಿಗೆ ಚರ್ಚ್ನಲ್ಲಿ ಫಾದರ್ ಸ್ಪೀಪನ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಾಂತಾಕ್ಲಾಸ್ ವೇಷ ಧರಿಸಿದ್ದ ಪುಟಾಣಿ ಮಕ್ಕಳು ಮನೆ ಮನೆಗೆ ತೆರಳಿ ಪರಸ್ಪರ ಶುಭಾಶಯ ಹಂಚಿಕೊಂಡರು. ಬಣ್ಣ ಬಣ್ಣ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕುಶಾಲನಗರ ಚರ್ಚ್ನ ಆಡಳಿತ ಮಂಡಳಿ ಸದಸ್ಯ ಶಾಜಿ ಕೆ.ಜಾರ್ಜ್, ರೋಟರಿ ಕ್ಲಬ್ ಅಧ್ಯಕ್ಷ ಕ್ರೆಜ್ವಲ್ ಕೊಟ್ಸ್, ರಾಯ್, ಏಸುದಾಸ್, ಜಾನ್, ಫಿಲಿಪ್ ವಾಸ್, ಅಂಥೋಣಿ ಪ್ರಭುರಾಜ್ ಮತ್ತಿತರರು ಹಾಜರಿದ್ದರು.
ಅಮ್ಮತ್ತಿಯಲ್ಲಿ ಬೃಹತ್ ಗೋದಲಿ
ವಿರಾಜಪೇಟೆ: ಸಮೀಪದ ಅಮ್ಮತ್ತಿಯ ಸಂತ ಅಂತೋಣಿ ದೇವಾಲಯದಲ್ಲಿ ಕ್ರೈಸ್ತ ಯುವಕರು ಕ್ರಿಸ್ಮಸ್ ಹಬ್ಬದ ಅಂಗವಾಗಿ ಮಂಗಳವಾರ ಬೃಹತ್ ಆಕಾರದ ಗೋದಲಿ ರಚಿಸಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು. ಗೋದಲಿಯ ಎತ್ತರ 12 ಅಡಿ, ಅಗಲ 16 ಅಡಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.