ವಾಷಿಂಗ್ಟನ್ (ಪಿಟಿಐ): ಆರ್ಥಿಕ ದಿಗ್ಬಂಧನ ಭೀತಿ, ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಮತ್ತು ಭಾರತದ ಆರ್ಥಿಕ ಕ್ರಾಂತಿಯ ರೂವಾರಿ ಎಂಬ ಹೆಗ್ಗಳಿಕೆ ಪಡೆಯಬೇಕು ಎನ್ನುವ ಆಕಾಂಕ್ಷೆಯೇ ಅಂದಿನ ಪ್ರಧಾನಿ ನರಸಿಂಹ ರಾವ್ ಅವರನ್ನು ಪರಮಾಣು ಪರೀಕ್ಷೆ ನಡೆಸದಂತೆ ಕಟ್ಟಿಹಾಕಿದ್ದವು.
ರಾವ್ ಅವರ ಈ ನಿಲುವಿನ ಬಗ್ಗೆ 1996ರಲ್ಲಿ ಬಿಲ್ ಕ್ಲಿಂಟನ್ ಆಡಳಿತವು ಈ ರೀತಿ ತೀರ್ಮಾನಕ್ಕೆ ಬಂದಿತ್ತು. ಅಮೆರಿಕದ ರಾಷ್ಟ್ರೀಯ ಪತ್ರಾಗಾರದ ರಹಸ್ಯ ಮಾಹಿತಿ ಶುಕ್ರವಾರ ಬಿಡುಗಡೆಯಾಗಿದ್ದು, ಅದರಲ್ಲಿ ಈ ಅಂಶಗಳು ಅಡಕವಾಗಿವೆ.
ಅಂತರರಾಷ್ಟ್ರೀಯ ಸಮುದಾಯದ ತೀವ್ರ ಒತ್ತಡದಿಂದ ಕೊನೆ ಗಳಿಗೆಯಲ್ಲಿ ರಾವ್ ಅವರು ಪರಮಾಣು ಪರೀಕ್ಷೆ ನಿರ್ಧಾರಿಂದ ಹಿಂದೆ ಸರಿದರು ಎಂದು ಅದರಲ್ಲಿ ಹೇಳಲಾಗಿದೆ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ 1995-96ರಲ್ಲಿ ಪೋಖರಣ್ನಲ್ಲಿ ಪರಮಾಣು ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಈ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆಗಳು ಕ್ಲಿಂಟನ್ ಆಡಳಿತಕ್ಕೆ ಸಚಿತ್ರ ವರದಿಗಳನ್ನು ನೀಡಿದ್ದವು. ಪರೀಕ್ಷೆ ನಡೆಸದಂತೆ ಅಂತರರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ರಾವ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎಂಬ ವಿವರಗಳು ಇದರಲ್ಲಿ ಇವೆ.
`ರಾವ್ ಮರು ಆಯ್ಕೆಗೆ ಪರಮಾಣು ಪರೀಕ್ಷೆಯು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಪರೀಕ್ಷೆ ನಡೆಸದೆಯೂ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯೂ ಹೆಚ್ಚಿತ್ತು. ಹಾಗಾಗಿಯೇ ರಾವ್ ಪರಮಾಣು ಪರೀಕ್ಷೆಯ ನಿರ್ಧಾರಿಂದ ಹಿಂದೆ ಸರಿದರು' ಎಂದು ವರದಿಯಲ್ಲಿ ಹೇಳಲಾಗಿದೆ.