ಜೈಪುರ್ (ಪಿಟಿಐ): ಮುಸ್ಲೀಂ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು ಮತ್ತು ಹಿಂಸಾಚಾರ ಉಂಟಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ, ಜೈಪುರ್ ಸಾಹಿತ್ಯ ಉತ್ಸವದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಬಹು ನಿರೀಕ್ಷಿತ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ವಿಡಿಯೊ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಮಧ್ಯಾಹ್ನ ಕೊನೆ ಗಳಿಗೆಯಲ್ಲಿ ಕೈ ಬಿಡಲಾಗಿದೆ.
ಜೈಪುರ್ ಸಾಹಿತ್ಯ ಉತ್ದವ ಮತ್ತು ಸೆಟಾನಿಕ್ ವರ್ಸಸ್ ಲೇಖಕ ರಶ್ದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮುಸ್ಲೀಂ ಸಂಘಟನೆಗಳ ನಡುವಿನ ಮಾತುಕತೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾತುಕತೆಯ ಸಂದರ್ಭದಲ್ಲಿ, ರಶ್ದಿ ಅವರ ಮುಖ ನೋಡುವುದೂ ತಮಗೆ ಸಹ್ಯವಿಲ್ಲವೆಂದು ಮುಸ್ಲೀಂ ಸಂಘಟನೆಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿದವೆನ್ನಲಾಗಿದೆ.
ರಶ್ದಿ ಅವರ ಸಂವಾದ ರದ್ದು ಪಡಿಸಿರುವುದನ್ನು ಘೋಷಿಸಿದ ಉತ್ಸವದ ಸಂಘಟಕರಲ್ಲೊಬ್ಬರಾದ ಸಂಜಯ್ ರಾಯ್ ಅವರು, ~ಕೆಲವು ಜನರು ಉತ್ಸವ ನಡೆಯುತ್ತಿರುವ ಸಭಾಂಗಣದಲ್ಲಿ ನುಗ್ಗಿದ್ದಾರೆ, ಅವರು ಗದ್ದಲವೆಬ್ಬಿಸಬಹುದು, ಹಿಂಸಾಚಾರಕ್ಕೂ ಇಳಿದಾರು~ ಎಂದು ಪೊಲೀಸರು ಎಚ್ಚರಿಸಿದ್ದಾರೆಂದು ತಿಳಿಸಿದ್ದಾರೆ.