ಬೆಂಗಳೂರು: ವಿಧಾನಮಂಡಲ ಅಧಿವೇಶನ ಆರಂಭವಾದ ಮೊದಲ ದಿನ ಎರಡನೇ ಸಾಲಿನಲ್ಲಿ ಕುಳಿತ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು, ಸೋಮವಾರ ಕೊನೇ ಸಾಲಿನಲ್ಲಿ ಕುಳಿತು ಕಲಾಪದಲ್ಲಿ ತೊಡಗಿಸಿಕೊಂಡರು.
ಪರಿಷತ್ತಿನ ಮೂಲಗಳ ಪ್ರಕಾರ, ಡಿ.ವಿ. ಸದಾನಂದಗೌಡ ಅವರೇ ಕೊನೇ ಸಾಲಿನಲ್ಲಿ ತಮಗೆ ಆಸನ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ. ಅಧಿಕಾರ ತ್ಯಜಿಸಿದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ವಿಧಾನಸಭೆಯಲ್ಲಿ ಕೊನೇ ಸಾಲಿನಲ್ಲಿ ಆಸೀನರಾಗಿದ್ದಾರೆ.
ಚಲನಚಿತ್ರ ನಟ ರಾಜೇಶ್ ಖನ್ನಾ ಹಾಗೂ ಮಾಜಿ ಶಾಸಕ ವಿ.ಎಲ್. ಶಿವಪ್ಪ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಿ, ಕಲಾಪವನ್ನು 10 ನಿಮಿಷ ಮುಂದೂಡಿದ ವೇಳೆ ಸದಾನಂದಗೌಡ ಅವರು ಕೆಲವು ಸದಸ್ಯರು ಹಾಗೂ ಅಧಿಕಾರಿಗಳತ್ತ ಕೈ ತೋರಿಸಿ ಸದನದಿಂದ ನಿರ್ಗಮಿಸಿದರು.