ಬೆಂಗಳೂರು: ಭಾರತ- ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ದೂರದ ಷಿಕಾಗೊದಿಂದ ಆಗಮಿಸಿದ್ದ ಪಾಕ್ ಅಭಿಮಾನಿ ಮೊಹಮ್ಮದ್ ಬಶೀರ್ ಸಿಹಿ ಹಾಗೂ ಕಹಿ ಅನುಭವದೊಂದಿಗೆ ಪಂದ್ಯ ನೋಡುವಲ್ಲಿ ಯಶಸ್ವಿಯಾದರು.
`ದಯವಿಟ್ಟು ನನಗೊಂದು ಟಿಕೆಟ್ ನೀಡಿ' ಎಂಬ ಭಿತ್ತಿಪತ್ರ ಹಿಡಿದುಕೊಂಡು ಬಶೀರ್ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸುತ್ತಾಡುತ್ತಿದ್ದರು. ಇದು ಸುದ್ದಿ ವಾಹಿನಿ ಹಾಗೂ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಟಿಕೆಟ್ ಲಭಿಸುವ ವಿಶ್ವಾಸದೊಂದಿಗೆ ಬಶೀರ್ ಮಂಗಳವಾರ ಬೆಳಿಗ್ಗೆಯೇ ಕ್ರೀಡಾಂಗಣದ ಬಳಿ ಆಗಮಿಸಿದ್ದರು. ಮಾತ್ರವಲ್ಲ ಅವರ ಪರಿಸ್ಥಿತಿಯನ್ನು ನೋಡಿದ ಸಹೃದಯಿಯೊಬ್ಬರು ಉಚಿತವಾಗಿ ಟಿಕೆಟ್ ಕೂಡ ನೀಡಿದರು. ಆದರೆ ಪಾಕಿಸ್ತಾನದ ರಾಷ್ಟ್ರಧ್ವಜ ಹಾಗೂ ಪಾಕ್ ತಂಡದ ಜರ್ಸಿಯನ್ನು ಕ್ರೀಡಾಂಗಣದ ಒಳಗೆ ಕೊಂಡೊಯ್ಯಲು ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಅಲ್ಪ ನಿರಾಸೆಯೊಂದಿಗೆ ಪಂದ್ಯ ವೀಕ್ಷಿಸಿದ್ದಾರೆ.
`ಪೊಲೀಸರ ಕ್ರಮದಿಂದ ನಿರಾಸೆಯಾಗಿದೆ. ಪಾಕಿಸ್ತಾನದ ಹಲವು ಅಧಿಕಾರಿಗಳಿಗೆ ರಾಷ್ಟ್ರಧ್ವಜ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಆದರೆ ನನಗೆ ಏಕೆ ನೀಡಿಲ್ಲ?' ಎಂದು ಪ್ರಶ್ನಿಸಿದ್ದಾರೆ.
`ಸಹೃದಯಿಯೊಬ್ಬರು ಹಣ ಪಡೆಯದೆ ನನಗೆ ಟಿಕೆಟ್ ನೀಡಿದರು. ಭಾರತದ ಜನರು ತುಂಬಾ ಒಳ್ಳೆಯವರು. ಆ ವ್ಯಕ್ತಿ ಟಿಕೆಟ್ ನೀಡಿದ ಕಾರಣ ಪಂದ್ಯ ವೀಕ್ಷಿಸಲು ಸಾಧ್ಯವಾಗಿದೆ. ಈ ಕ್ಷಣವನ್ನು ಜೀವನದ ಉದ್ದಕ್ಕೂ ಮರೆಯಲಾರೆ' ಎಂದು ಬಶೀರ್ ಪ್ರತಿಕ್ರಿಯಿಸಿದ್ದಾರೆ.