ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಬಿಎಸ್‌ವೈ ಜೈಲಿಗೆ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರಿಂದ ಬುಧವಾರ ಬೆಳಿಗ್ಗೆ ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ನ್ಯಾಯಾಂಗ ಬಂಧನಕ್ಕೆ ಒಳಗಾದ ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಇತರೆ ಚಿಕಿತ್ಸೆಗೆಂದು ಅವರನ್ನು ಮಂಗಳವಾರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಚಿಕಿತ್ಸೆಯನ್ನು ನಿರಾಕರಿಸಿದ ಅವರು, ಬದಲಿಗೆ ತಾವು ಕೇಂದ್ರ ಕಾರಾಗೃಹದಲ್ಲಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವುದಾಗಿ ಪಟ್ಟು ಹಿಡಿದರು. ಅವರ ಒತ್ತಾಯದ ಮೇಲೆ ಬುಧವಾರ ಬೆಳಿಗ್ಗೆ 10.15ರ ಹೊತ್ತಿಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಅಂಬುಲೆನ್ಸ್ ಮೂಲಕ ಅವರನ್ನು ಬೆಳಿಗ್ಗೆ 10.55ರ ವೇಳೆಗೆ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಇದಕ್ಕೂ ಮೊದಲು ಆಸ್ಪತ್ರೆಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಪಿ. ಯೋಗೀಶ್ವರ್, `ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳಿಂದ ಯಡಿಯೂರಪ್ಪ ಅವರು ಬಹಳ ಬೇಸರಗೊಂಡಿದ್ದಾರೆ~ ಎಂದರು.

`ನಾನೇನು ಹೆದರಿಕೆಯಿಂದ ಆಸ್ಪತ್ರೆಗೆ ದಾಖಲಾಗಿಲ್ಲ. ಧೈರ್ಯವಾಗಿ ಜೈಲಿಗೆ ಹೋಗುತ್ತೇನೆ. ಹಾಗಾಗಿ ಚಿಕಿತ್ಸೆ ಪಡೆಯುತ್ತಿಲ್ಲ ಎಂಬುದಾಗಿ ಯಡಿಯೂರಪ್ಪ ಹೇಳಿದರು~ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಅವರನ್ನು ಮೈಸೂರಿನ ಸುತ್ತೂರು ಮಠದ ಸ್ವಾಮಿಗಳು ಭೇಟಿ ಮಾಡಿದರು.
ಆಸ್ಪತ್ರೆಯ ಪ್ರತಿಕ್ರಿಯೆ: `ಯಡಿಯೂರಪ್ಪ ಅವರು ಮಂಗಳವಾರ ಸಂಜೆ 7.10ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದರು. ನಿಯಂತ್ರಣವಿಲ್ಲದ ಮಧುಮೇಹ, ರಕ್ತದೊತ್ತಡ, ಹೈಪೋ ಥೈರಾಡಿಸಂ, ಉಸಿರಾಟದ ತೊಂದರೆ, ಬೆನ್ನು ನೋವು, ಕೈಕಾಲು ನೋವಿನಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಬೇಕಿತ್ತು~ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಆದ ಡೀನ್ ಡಾ.ಒ.ಎಸ್. ಸಿದ್ದಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಆ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಔಷಧವನ್ನೇ ಮುಂದುವರಿಸಲಾಯಿತು. ಅವರ ರಕ್ತದಲ್ಲಿ ಸೋಡಿಯಂ ಲವಣ ಕಡಿಮೆ ಇದ್ದ ಕಾರಣ ಲವಣ ಪ್ರಮಾಣ ಹೆಚ್ಚಳಕ್ಕೆ ಚಿಕಿತ್ಸೆ ನೀಡಲು ವೈದ್ಯರ ತಂಡ ಮುಂದಾಯಿತು. ಆದರೆ ಯಡಿಯೂರಪ್ಪ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದರು~ ಎಂದು ಹೇಳಿದರು.

`ರಾತ್ರಿ ಮನೆ ಊಟ ಸೇವಿಸಿ ವಿಶ್ರಾಂತಿ ಪಡೆದರು. ಬೆಳಿಗ್ಗೆ 8.30ರ ಹೊತ್ತಿಗೆ ವೈದ್ಯರ ತಂಡ ಮತ್ತೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲು ಮುಂದಾದರೂ ಅವರು ಅವಕಾಶ ನೀಡಲಿಲ್ಲ. 9 ಗಂಟೆಗೆ ನಾನು ಕೂಡ ವೈದ್ಯರೊಂದಿಗೆ ತೆರಳಿದಾಗ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದರು~ ಎಂದರು.

ಆ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ವಿರುದ್ಧವಾಗಿ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಅಲ್ಲದೇ ಕೆಲವು ಸಲಹೆಗಳನ್ನು ನೀಡಲಾಗಿದೆ.

ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ಸೂಚಿಸಿರುವ ಔಷಧ ತೆಗೆದುಕೊಳ್ಳಬೇಕು. ಸೋಡಮಿಂಟ್ ಮಾತ್ರೆಯನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು. ಮೂರು ದಿನ ಬಳಿಕ ರಕ್ತದಲ್ಲಿ ಸೋಡಿಯಂ ಲವಣ ಪ್ರಮಾಣ ಪರೀಕ್ಷಿಸಬೇಕು ಎಂದು ಸಲಹೆ ನೀಡಲಾಗಿದೆ~ ಎಂದರು.

`ಮೂತ್ರರೋಗತಜ್ಞರು, ನರರೋಗ ತಜ್ಞರು, ಮೂಳೆ ತಜ್ಞರು, ನೇತ್ರ ತಜ್ಞರು, ಮನೋವೈದ್ಯರು ಹಾಗೂ ಶ್ವಾಸಕೋಶ ತಜ್ಞರಿಂದ ಚಿಕಿತ್ಸೆ ಪಡೆಯಬಹುದು. ಹಾಗೆಯೇ ನಿತ್ಯ ಮಧುಮೇಹ ತಪಾಸಣೆ ನಡೆಸುವಂತೆ ಸಲಹೆ ನೀಡಲಾಗಿದೆ~ ಎಂದು ವಿವರಿಸಿದರು.

ಜೈಲಿನಲ್ಲಿ: ಯಡಿಯೂರಪ್ಪ ಅವರಿಗೆ ಈ ಹಿಂದೆ ನೀಡಲಾಗಿದ್ದ ವಿಚಾರಣಾಧೀನ ಕೈದಿ ಸಂಖ್ಯೆ 10462 ಮುಂದುವರೆಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೊದಲನೇ ಮಹಡಿಯಲ್ಲಿರುವ ವಿಶೇಷ ಭದ್ರತಾ ವಿಭಾಗದ ಕೊಠಡಿ ಸಂಖ್ಯೆ ಐದರಲ್ಲಿ ಅವರನ್ನು  ಇರಿಸಲಾಗಿದೆ.

ಅಂಬುಲೆನ್ಸ್‌ನಲ್ಲಿ ಜೈಲಿಗೆ ಬಂದ ಯಡಿಯೂರಪ್ಪ ಅವರನ್ನು ಕಾರಾಗೃಹ ಆಸ್ಪತ್ರೆ ವೈದ್ಯರು ತಪಾಸಣೆಗೆ ಒಳಪಡಿಸಿದರು. ಆ ನಂತರ ಅವರನ್ನು ಕೊಠಡಿ ಸಂಖ್ಯೆ ಐದಕ್ಕೆ ಕಳುಹಿಸಲಾಯಿತು.

20/15 ಅಳತೆಯ ಕೊಠಡಿಯಲ್ಲಿ ಐದು ಅಡಿ ಅಗಲದ ಶೌಚಾಲಯವಿದೆ. ಮಂಡಿ ನೋವು ಇರುವ ಹಿನ್ನೆಲೆಯಲ್ಲಿ ಅವರಿಗೆ ಕಮೋಡ್ ನೀಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಆದ್ದರಿಂದ ಅವರಿಗೆ ಕಮೋಡ್ ನೀಡಲು ವ್ಯವಸ್ಥೆ ಮಾಡಲಾಗಿದೆ. ವೈದ್ಯರ ಸಲಹೆಯ ಹಿನ್ನೆಲೆಯಲ್ಲಿ ಅವರಿಗೆ ಮಂಚ ಮತ್ತು ಹಾಸಿಗೆ ನೀಡಲಾಗಿದೆ. ಫ್ಯಾನ್ ಮತ್ತು ಎರಡು ಕುರ್ಚಿಗಳನ್ನೂ ಕೊಠಡಿಯಲ್ಲಿ ಇಡಲಾಗಿದೆ.

ಏಕಾಂಗಿ ಯಡಿಯೂರಪ್ಪ: ವಿಕ್ಟೋರಿಯಾ ಆಸ್ಪತ್ರೆಯಿಂದ ಜೈಲಿಗೆ ಹೋದ ನಂತರ ಯಡಿಯೂರಪ್ಪ ಅವರು ಯಾರೊಂದಿಗೂ ಮಾತನಾಡಿಲ್ಲ. ಗುರುವಾರ ಸಂಜೆಯ ತನಕ ಯಾರನ್ನೂ ಭೇಟಿ ಮಾಡಲು ಬಿಡಬೇಡಿ ಎಂದು ಅವರು ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಜೈಲಿಗೆ ಬಂದು ಯಡಿಯೂರಪ್ಪ ಅವರನ್ನು ಭೇಟಿಯಾಗಲು ಯತ್ನಿಸಿದರು. ಆದರೆ ಅಧಿಕಾರಿಗಳು ಅವರಿಗೆ ಅವಕಾಶ ನೀಡಲಿಲ್ಲ.

ಮನೆ ಊಟಕ್ಕೆ ಜೈಲು ಅಧಿಕಾರಿಗಳು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಅವರು ಮನೆಯಿಂದ ತಂದಿದ್ದ ಊಟ ಮಾಡಿದರು. ಅಂಬೇಡ್ಕರ್ ಜೀವನ ಚರಿತ್ರೆ ಸೇರಿದಂತೆ ಗ್ರಂಥಾಲಯದಿಂದ ಅವರು ಒಟ್ಟು ಹತ್ತು ಪುಸ್ತಕಗಳನ್ನು ಪಡೆದಿದ್ದಾರೆ.

ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್, ಇಟಾಸ್ಕಾ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಶ್ರೀನಿವಾಸ್ ಅವರು ಕೊಠಡಿ ಸಂಖ್ಯೆ ನಾಲ್ಕರಲ್ಲಿದ್ದಾರೆ.

ಬಂಧಿಖಾನೆ ಸಚಿವರ ಭೇಟಿ: ಜೈಲಿಗೆ ಭೇಟಿ ನೀಡಿದ ಬಂಧಿಖಾನೆ ಸಚಿವ ಎ.ನಾರಾಯಣಸ್ವಾಮಿ ಅವರು, ಯಡಿಯೂರಪ್ಪ ಅವರಿಗೆ ನೀಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆದರೆ ಯಡಿಯೂರಪ್ಪ ಅವರ ಜತೆ ಮಾತನಾಡಿಲ್ಲ ಎಂದು ತಿಳಿದುಬಂದಿದೆ.

ಜಯಲಲಿತಾ ಪ್ರಕರಣದ ವಿಚಾರಣೆ ನಡೆಯಲಿರುವ ವಿಶೇಷ ನ್ಯಾಯಾಲಯದ ಬಗ್ಗೆಯೂ ಸಚಿವರು ಮಾಹಿತಿ ಪಡೆದರು ಎಂದು  ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT