ಕೆಜಿಎಫ್: ಹೆಚ್ಚುವರಿ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯಗಳಿಗಾಗಿ ಒತ್ತಾಯಿಸಿ ಬೆಮೆಲ್ ರೈಲ್ವೆ ಕೋಚ್ ತಯಾರಿಕಾ ಘಟಕದ ಗುತ್ತಿಗೆ ಕಾರ್ಮಿಕರ ನಡೆಸುತ್ತಿದ್ದ ಮುಷ್ಕರ ಬುಧವಾರ ಕೊನೆಗೊಂಡಿತು.
ರೈಲ್ವೆ ಕೋಚ್ ತಯಾರಿಕಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 350 ಕಾರ್ಮಿಕರು ಮಂಗಳವಾರ ರಾತ್ರಿ ದಿಢೀರನೇ ಮುಷ್ಕರ ನಡೆಸಿ, ಕಾರ್ಖಾನೆಯ ಪೀಠೋಪಕರಣಗಳನ್ನು ಒಡೆದು ಹಾಕಿದ್ದರು.
ಮುಷ್ಕರನಿರತ ಗುತ್ತಿಗೆ ಕಾರ್ಮಿಕರು ಬುಧವಾರ ಮುಂಜಾನೆ ಪುನಃ ಕಾರ್ಖಾನೆ ಬಳಿ ಜಮಾಯಿಸಿ ಆಡಳಿತ ವರ್ಗ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕಾರ್ಖಾನೆಯೊಳಗೆ ಪ್ರವೇಶಿಲು ಬಂದಿದ್ದ ವಾಹನಗಳನ್ನು ಕೆನಡೀಸ್ ಬಳಿ ತಡೆದರು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಕಾರ್ಮಿಕರನ್ನು ಚದುರಿಸಿದರು.
ನಂತರ ಬೆಮಲ್ ಕಾರ್ಖಾನೆಯ ಮಾನವ ಸಂಪನ್ಮೂಲ ಇಲಾಖೆಯ ಮುಖ್ಯಸ್ಥ ಮುರುಗೇಶನ್ ಕಾರ್ಖಾನೆಗೆ ಆಗಮಿಸಿ, ಕಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಿದರು. ಕಾರ್ಮಿಕರ ಬೇಡಿಕೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸಲು ಆಡಳಿತ ಮಂಡಳಿ ಜೊತೆ ಚರ್ಚಿಸಲಾಗುವುದು.
ಸಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಅಶಿಸ್ತಿಗಾಗಿ ಕೆಲಸದಿಂದ ತೆಗೆದು ಹಾಕಬಹುದು. ಆದರೆ ಮಾನವೀಯತೆ ದೃಷ್ಟಿಯಿಂದ ಎಲ್ಲರನ್ನೂ ಪುನಃ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಲಾಯಿತು.ನಂತರ ಸುಮಾರು ಮೂವತ್ತು ಕಾರ್ಮಿಕರು ಮೊದಲ ಪಾಳಿಗೆ ಕೆಲಸಕ್ಕೆ ಹಾಜರಾದರು. ಎರಡನೇ ಪಾಳಿಯದಲ್ಲಿ ನೂರಕ್ಕೂ ಹೆಚ್ಚು ಮಂದಿ ಕಾರ್ಖಾನೆಗೆ ಪ್ರವೇಶಿಸಿದರು.