ಕೊಪ್ಪ: ತಾಲ್ಲೂಕಿನ ಹಿರೇಕೊಡಿಗೆ ಗ್ರಾ.ಪಂ. ವ್ಯಾಪ್ತಿಯ ಕತ್ತಲಗಿರಿಯ ಪ್ರಗತಿಪರ ಸಾವಯವ ಕೃಷಿಕ ಮಂಜುನಾಥಮೂರ್ತಿ ಅವರ ಕೃಷಿ ಕ್ಷೇತ್ರದಲ್ಲಿ ಗುರುವಾರ ಕೃಷಿ ಇಲಾಖೆ ವತಿಯಿಂದ ಭೂಚೇತನ ಕಾರ್ಯಕ್ರಮದಡಿ ಭತ್ತದ ಕ್ಷೇತ್ರೋತ್ಸವ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುರುಷೋತ್ತಮ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಂಜುನಾಥಮೂರ್ತಿ ಅವರ 1.5 ಎಕರೆ ತರಿ ಭೂಮಿಯಲ್ಲಿ ಯಾಂತ್ರೀಕೃತ ನಾಟಿ ಮಾಡಿರುವುದಲ್ಲದೆ ಸಕಾಲದಲ್ಲಿ ಲಘು ಪೋಷಕಾಂಶಗಳನ್ನು ಬೆಳೆಗೆ ಒದಗಿಸಿರುವುದರಿಂದ ಶೇ 20ರಷ್ಟು ಅಧಿಕ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದರು.
ಕೃಷಿಕ ಮಂಜುನಾಥ ಮೂರ್ತಿ ಮಾತನಾಡಿ, ಕೃಷಿ ಇಲಾಖೆ ಕ್ಷೇತ್ರಪಾಠಶಾಲೆ ಮೂಲಕ ಉಪಯುಕ್ತ ಮಾಹಿತಿ ನೀಡಿತು. ಕೃಷಿ ಅನುವುಗಾರ ರಾಜಾಶಂಕರ್ ಮಾರ್ಗದರ್ಶನದಲ್ಲಿ ಬೊರೆಕ್ಸ್, ಜಿಂಕ್ ಸಲ್ಫೇಟ್ ಪೋಷಕಾಂಶ ಒದಗಿಸಿದ್ದು, ಪಿ.ಇ.ಟಿ. ತಳಿ ಉತ್ತಮ ಇಳುವರಿ ನೀಡಿದೆ ಎಂದರು.