ಕೊಪ್ಪ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರ ಕೆಸವಿನ ಕೆರೆ ತಿರುವು ಎಂಬಲ್ಲಿ ಸೋಮವಾರ ಮಧ್ಯಾಹ್ನ ಮಲ ಸಾಗಿಸುತ್ತಿದ್ದ ಪಟ್ಟಣ ಪಂಚಾಯಿತಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಅದರ ಅಡಿ ಸಿಲುಕಿ ಚಾಲಕ ಸೇರಿದಂತೆ ಮೂವರು ಪಂಚಾಯಿತಿ ಗುತ್ತಿಗೆ ಕಾರ್ಮಿಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಪಟ್ಟಣದ ಖಾಸಗಿ ವ್ಯಕ್ತಿಯೊಬ್ಬರ ಶೌಚಗುಂಡಿಯಿಂದ ಮಲ ಹೀರುವ ಯಂತ್ರದ ಟ್ಯಾಂಕರ್ ಪಟ್ಟಣದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಸುರಿಯಲು ಸಾಗಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಚಾಲಕ ಚಂದ್ರ (40), ನಾಗರಾಜ (28) ಮತ್ತು ಎಲ್ಲಪ್ಪ(32) ಸ್ಥಳದಲ್ಲೇ ಮೃತಪಟ್ಟರು.
ಕೆಸವಿನಕೆರೆ ತಿರುವಿನಲ್ಲಿ ಇದುವರೆಗೆ 20ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದರೂ ತಡೆಗೋಡೆ ನಿರ್ಮಾಣವಾಗಲಿ, ತಿರುವು ನೇರಗೊಳಿಸಲು ಹೆದ್ದಾರಿ ನಿಗಮ ಗಮನ ಹರಿಸದಿರುವ ಬಗ್ಗೆ ಆಕ್ಷೇಪಗಳು ಕೇಳಿಬಂದಿವೆ.
ಸ್ಥಳಕ್ಕೆ ಶಾಸಕ ಡಿ.ಎನ್.ಜೀವರಾಜ್, ಕಾಂಗ್ರೆಸ್ ಮುಖಂಡ ಟಿ.ಡಿ.ರಾಜೇಗೌಡ ಮೊದಲಾದವರು ಭೇಟಿ ನೀಡಿದ್ದರು.