ಯಲಬುರ್ಗಾ: ಈಚೆಗೆ ನಡೆದ ಕೊಪ್ಪಳ ವಿಧಾನ ಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ತೀವ್ರ ಸ್ಪರ್ಧೆಯ ನಡುವೆಯೂ ಬಹುಮತ ಪಡೆದು ಜಯಗಳಿಸಿದ ಶಾಸಕ ಸಂಗಣ್ಣ ಕರಡಿಯವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಸ್ಥಳೀಯ ಬಿಜೆಪಿ ಯುವ ಮುಖಂಡ ಶಿವಪ್ಪ ರಾಂಪೂರ, ಆನಂದಪ್ಪ ಪತ್ತಾರ ಒತ್ತಾಯಿಸಿದ್ದಾರೆ.
ವಿವಿಧ ಪಕ್ಷದಿಂದ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸಂಗಣ್ಣನವರು ಜಿಲ್ಲೆಯಲ್ಲಿಯೇ ಅತ್ಯಂತ ಜನಪ್ರಿಯತೆ ಗಳಿಸಿದ ಜನನಾಯಕರಾಗಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಘಟಾನುಗಟಿಗಳನ್ನು ಹಿಂದೆಹಾಕಿ ಬಿಜೆಪಿ ಪಕ್ಷಕ್ಕೆ ಪ್ರಥಮ ಜಯತಂದುಕೊಟ್ಟ ಕರಡಿಯವರ ಸಾಧನೆಯು ಜಿಲ್ಲೆಯ ಯುವ ಬಿಜೆಪಿ ವಲಯದಲ್ಲಿ ಚೈತನ್ಯ ಮೂಡುವಂತೆ ಮಾಡಿದೆ.
ಜನಾನುರಾಗಿಯಾಗಿ ಸೇವೆಸಲ್ಲಿಸುತ್ತರುವ ಕೊಪ್ಪಳ ಶಾಸಕ ಸಂಗಣ್ಣನವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಸೂಕ್ತವ್ಯಕ್ತಿಯಾಗಿದ್ದಾರೆ. ವಿಶೇಷವಾಗಿ ಯಲಬುರ್ಗಾ ಕ್ಷೇತ್ರದ ಆಡಳಿತ ಸ್ವಲ್ಪ ಹಿನ್ನಡೆಯಾಗಿದ್ದರ ಹಿನ್ನೆಲೆಯಲ್ಲಿ ಈ ಭಾಗದ ಜನಪ್ರತಿನಿಧಿಗಳೇ ಉಸ್ತುವಾರಿ ಸಚಿವರಾದರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಸೂಕ್ತ ಸ್ಥಾನಮಾನ ದೊರಕಿಸಿಕೊಡುವುದರ ಜೊತೆಗೆ ಜಿಲ್ಲಾ ಕೇಂದ್ರವನ್ನೆ ಸಮಗ್ರ ಅಭಿವೃದ್ಧಿ ಗೊಳಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಬಿಜೆಪಿ ರಾಜ್ಯ ಘಟಕದ ಮುಖಂಡರು ಸಂಗಣ್ಣನವರನ್ನು ಸಚಿವರನ್ನಾಗಿ ಆಯ್ಕೆ ಮಾಡುವುದು ಪಕ್ಷ ಹಾಗೂ ಜಿಲ್ಲೆಯ ಜನತೆಗೂ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.