ಕೊಪ್ಪಳ: ಕಲ್ಮಲಾ ಮತ್ತು ಶಿಗ್ಗಾಂವ್ ಮತ್ತು ಗಿಣಿಗೇರಾ ಗೊಂಡಬಾಳ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸುವ ರೂ 22.58 ಕೋಟಿ ಮೊತ್ತದ ಕಾಮಗಾರಿಗೆ ಅ.16ರಂದು ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಸಂಗಣ್ಣ ಕರಡಿ ಸೋಮವಾರ ಇಲ್ಲಿ ಹೇಳಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಲ್ಮಲಾ ಶಿಗ್ಗಾಂವ್ ನಡುವಿನ ರಾಜ್ಯ ಹೆದ್ದಾರಿ ನಂ 23ರ 162.45 ಕಿ.ಮೀ.ದಿಂದ 203.58 ಕಿಮೀ ವರೆಗೆ ಹಾಗೂ ಗಿಣಿಗೇರಾ ದಿಂದ ಗೊಂಡಬಾಳ ಮಧ್ಯದ 4.57 ಕಿಮೀ ದಿಂದ 20.90 ಕಿಮೀ ವರೆಗಿನ ರಸ್ತೆ ಆಧುನೀಕರಣಗೊಳಿಸಲು ಈಗಾಗಲೇ ಕೆಲಸದ ಆದೇಶ ನೀಡಲಾಗಿದ್ದು ಆರು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಅಲ್ಲದೇ ಸದರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆಧುನಿಕ ತಂತ್ರಜ್ಞಾನ ಬಳಸಲಾಗುತ್ತದ ಎಂದು ಹೇಳಿದರು.
ಸರ್ಕ್ಯೂಟ್ಹೌಸ್: ನಗರದಲ್ಲಿ ರೂ 1.36 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕ್ಯೂಟ್ಹೌಸ್ ಅನ್ನು ಬಂದರು ಒಳನಾಡು ಮತ್ತು ಲೋಕೋಪಯೋಗಿ ಖಾತೆ ಸಚಿವ ಸಿ.ಎಂ.ಉದಾಸಿ ಅ.16ರಂದು ಮಧ್ಯಾಹ್ನ 12 ಗಂಟೆಗೆ ಉದ್ಘಾಟಿಸಲಿದ್ದಾರೆ, ಸರ್ಕ್ಯೂಟ್ ಹೌಸ್ ಮುಂಭಾಗಲ್ಲಿ ವಿಶಾಲ ಆವರಣ ಮತ್ತು ಉದ್ಯಾನ ನಿರ್ಮಾಣಗೊಂಡಿದೆ ಎಂದು ಶಾಸಕ ಹೇಳಿದರು.
ಏತ ನೀರಾವರಿ: ರೂ 154 ಕೋಟಿ ಅಂದಾಜು ವೆಚ್ಚದ ಬೆಟಗೇರಿ ಅಳವಂಡಿ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಹಣಕಾಸು ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮೋದನೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ ಸಂಗಣ್ಣ, ಇದರಿಂದ ಸುಮಾರು 20 ಸಾವಿರ ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ.
ಒಟ್ಟಾರೆ ಸಿಂಗಟಾಲೂರು ಏತ ನೀರಾವರಿ ಸೇರಿದರೆ ಒಟ್ಟು 64 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಯಲಿದೆ ಎಂದರು.
ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಟಿಎಪಿಎಎಂಎಸ್ ಅಧ್ಯಕ್ಷ ಚಂದ್ರೇಗೌಡ ಪಾಟೀಲ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ವೀರೇಶ ಲಚ್ಚಾಣಿ ಇದ್ದರು.