ಗಂಗಾವತಿ: ಹೈದ್ರಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಳೆದ ನಾಲ್ಕು ವರ್ಷದಲ್ಲಿ ಕೊಪ್ಪಳ ಜಿಲ್ಲೆಗೆ ಒಟ್ಟು ರೂ, 53 ಕೋಟಿ ಮೊತ್ತದ ಅನುದಾನ ಮಂಜೂರಾಗಿದೆ ಎಂದು ವಿಧಾನ ಪರಿಷತ ಸದಸ್ಯ ಹಾಗೂ ಎಚ್ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ್ ಹೇಳಿದರು.
ವಿಧಾನ ಪರಿಷತ್ತಿಗೆ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು, ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ವಕೀಲರನ್ನು ಭೇಟಿಯಾದರು. ತಮ್ಮನ್ನು ಆಯ್ಕೆಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿ ಮಾತನಾಡಿದರು.
ಕೇವಲ ವಿಧಾನ ಪರಿಷತ್ ಸದಸ್ಯನಾಗಿ ಮಾತ್ರವಲ್ಲ, ಹೈ-ಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿ ಕಳೆದ ಮೂರು ವರ್ಷಗಳಿಂದ ಈ ಭಾಗದ ನೋವು-ನಲಿವಿಗೆ ಸ್ಪಂದಿಸುತ್ತಾ ನಿರಂತರ ಜನರ ಜೊತೆ ಸಂಪರ್ಕ ಇಟ್ಟಿಕೊಂಡಿರುವುದು ಚುನಾವಣೆಯಲ್ಲಿ ಗೆಲುವಿಗೆ ಕಾರಣವಾಯಿತು.
ಪ್ರಸಕ್ತ ಸಾಲಿನಲ್ಲಿ ಮಂಡಳಿಯಿಂದ ಜಿಲ್ಲೆಗೆ ರೂ, 5.20 ಕೋಟಿ ಹಣ ನೀಡಲಾಗಿದೆ. ಕೊಪ್ಪಳದ ಅಪೂರ್ಣಸ್ಥಿತಿಯ ವಿಜ್ಞಾನ ಮಂದಿರ ಪೂರ್ಣಕ್ಕೆ ರು, 15 ಲಕ್ಷ, ಕೊಪ್ಪಳ-ಗಂಗಾವತಿಯ ವಕೀಲರ ಸಂಘದ ಪೀಠೋಪಕರಣ, ಪುಸ್ತಕ ಖರೀದಿಗೆ ತಲಾ ನಾಲ್ಕು ಲಕ್ಷ ನೀಡಲಾಗಿದೆ.
ಕನಕಗಿರಿ-ಕುಷ್ಟಗಿಯ ರಸ್ತೆಗಳ ಅಭಿವೃದ್ಧಿಗೆ ರೂ, 13ಲಕ್ಷ ಸೇರಿದಂತೆ ವಿವಿಧ ಆದ್ಯತೆಯ ಪ್ರಕಾರ ಅನುದಾನ ನೀಡಲಾಗಿದೆ. ಈ ಮೊದಲು ಮಂಡಳಿಗೆ ಕೇವಲ ರೂ, 21 ಕೋಟಿ ಮಾತ್ರ ಅನುದಾನ ಇತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅನುದಾನ ದ್ವಿಗುಣವಾಗಿದೆ.
ರೂ, 21ಕೋಟಿ ಇದ್ದ ಅನುದಾನ, ಯಡಿಯೂರಪ್ಪ ರೂ, 23 ಕೋಟಿಗೆ, ಬಳಿಕ ಮರುವರ್ಷ ರೂ, 45 ಕೋಟಿ ನೀಡಿದರು. ಸದಾನಂದಗೌಡರು ಕಳೆದ ವರ್ಷ ಮಂಡಳಿಗೆ ರೂ, 63 ಕೋಟಿ ನೀಡುವ ಮೂಲಕ ಹೈ-ಕ ಭಾಗದ ಅಭಿವೃದ್ಧಿಗೆ ಸಹಕಾರ ನೀಡಿದರು ಎಂದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮಂಡಳಿಯಿಂದ ಗಂಗಾವತಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಮತದಾರರ ಋಣ ತೀರಿಸುವಂತೆ ಪಾಟೀಲರಿಗೆ ಮನವಿ ಮಾಡಿದರು. ಶರಣೇಗೌಡ ಮಾಲಿ ಪಾಟೀಲ್, ಎಚ್. ಗಿರೇಗೌಡ, ಹಾಷ್ಮುದ್ದೀನ ಇತರರಿದ್ದರು.