ಗುಬ್ಬಿ: ರೈತರು ಉತ್ಕೃಷ್ಟ ಕೊಬ್ಬರಿ ತಂದು ಉತ್ತಮ ಬೆಲೆ ಪಡೆದುಕೊಳ್ಳಿ ಎಂದು ರೈತರಿಗೆ ಸಂಸದ ಜಿ.ಎಸ್.ಬಸವರಾಜು ಕಿವಿಮಾತು ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಿ ರೈತರಿಗೆ ಶೋಷಣೆ ಆಗದಂತೆ ನಾಫೆಡ್ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು. ವರ್ತಕರು ಮತ್ತು ದಳ್ಳಾಳಿಗಳ ವ್ಯವಹಾರ ಸರಿದೂಗಿಸುವ ನಿಟ್ಟಿಗಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ರೈತರಿಂದ 10ಕ್ವಿಂಟಲ್ ಖರೀದಿ ನಿಗದಿ ಮಾಡದಿರುವುದು ಸೂಕ್ತವಲ್ಲ. ಕನಿಷ್ಠ 50 ಕ್ವಿಂಟಲ್ವರೆಗೆ ನಿಗದಿಗೊಳಿಸಿದರೆ ರೈತರಿಗೆ ವರದಾನವಾಗಲಿದೆ. ಸದರಿ ಮಾರಾಟವಾದ ಕೊಬ್ಬರಿಗೆ ವಾರದಲ್ಲಿ ಹಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಪಿಎಂಸಿ ಅಧ್ಯಕ್ಷ ಬಿ.ಎಚ್.ಶಿವಣ್ಣ ಮಾತನಾಡಿ, ರೈತರು ಗುಣಮಟ್ಟದ ಕೊಬ್ಬರಿ ನೀಡಿಕೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹದಿಂದ 6050 ನಿಗದಿಪಡಿಸಿದೆ. ದೃಢೀಕರಣವನ್ನು ಆಗಸ್ಟ್ 4ರಿಂದ ಎಪಿಎಂಸಿ ಕಚೇರಿಯಿಂದ ಪಡೆಯಬಹುದು.
ಪ್ರಸಕ್ತ ಒಂದು ಕೇಂದ್ರ ತೆರೆಯಲಾಗಿದ್ದು, ದಿನಕ್ಕೆ 250 ಚೀಲ ಖರೀದಿಸಲಾಗುವುದು. ಹೆಚ್ಚು ಕೊಬ್ಬರಿ ಬಂದರೆ ಇನ್ನೊಂದು ಕೇಂದ್ರ ತೆರೆಯಲಾಗುವುದು. ಕೃಷಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಮಾರುಕಟ್ಟೆ ಮಹಾಮಂಡಳಿ ನಿರ್ದೇಶಕ ಕೆ.ಷಡಕ್ಷರಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ಧಲಿಂಗಪ್ಪ, ಎಪಿಎಂಸಿ ಸದಸ್ಯರಾದ ಜಿ.ಎನ್.ಬೆಟ್ಟಸ್ವಾಮಿ, ಎಂ.ಸಿ.ಶಿವಕುಮಾರ್, ನಾಫೆಡ್ ಸಂಸ್ಥೆಯ ವಿಭಾಗೀಯ ಮಾರಾಟ ಅಧಿಕಾರಿ ಲಕ್ಷ್ಮೀ, ಶಾಖಾ ವ್ಯವಸ್ಥಾಪಕಿ ಕೆ.ಶಿಲ್ಪಾ ಇತರರು ಹಾಜರಿದ್ದರು.