ಬೆಂಗಳೂರು: ಬಾಣಸವಾಡಿ ರೈಲು ನಿಲ್ದಾಣದ ಸಮೀಪ ನಡೆದಿದ್ದ ವಿಜಯ್ (29) ಎಂಬ ಕೂಲಿ ಕಾರ್ಮಿಕನ ಕೊಲೆ ಪ್ರಕರಣದ ಆರೋಪಿಗಳನ್ನು ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯ್ರ ಪತ್ನಿ ಕಾಂಚನಾ ಅವರ ತಮ್ಮ ಅಜಿತ್ (23) ಮತ್ತು ಅಣ್ಣಾಮಲೈ (27) ಬಂಧಿತರು.
ತಮಿಳುನಾಡು ಮೂಲದ ಕಾಂಚನಾ ಮತ್ತು ವಿಜಯ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತಮಿಳುನಾಡಿನಲ್ಲಿ ಅವರ ಮನೆಯ ಸಮೀಪವೇ ವಾಸವಾಗಿದ್ದ ಅಣ್ಣಾಮಲೈ, ಕಾಂಚನಾ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ಕಾರಣಕ್ಕಾಗಿ ವಿಜಯ್ ಪತ್ನಿಯೊಂದಿಗೆ ನಗರದ ಲಿಂಗರಾಜಪುರಕ್ಕೆ ಬಂದು ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಕೋಪಗೊಂಡಿದ್ದ ಅಣ್ಣಾಮಲೈ, ಅಜಿತ್ ಮೂಲಕ ಸೆ.19ರಂದು ರಾತ್ರಿ ವಿಜಯ್ ಅವರನ್ನು ರೈಲು ನಿಲ್ದಾಣದ ಸಮೀಪ ಕರೆಸಿಕೊಂಡು ಮಚ್ಚಿನಿಂದ ತಲೆ ಕಡಿದು ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯ ಎಸಗಿದ ನಂತರ ತಮಿಳುನಾಡಿಗೆ ಹೋಗಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸಿಬ್ಬಂದಿ ಬಂಧಿಸಿ ನಗರಕ್ಕೆ ಕರೆತಂದರು. ನ್ಯಾಯಾಲಯದ ಅನುಮತಿ ಪಡೆದು ಹೆಚ್ಚಿನ ತನಿಖೆಗಾಗಿ ಅವರಿಬ್ಬರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.