ಕೊಲ್ಹಾಪುರ (ಪಿಟಿಐ): ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಒಂಬತ್ತು ರಸ್ತೆಗಳಲ್ಲಿ ಸುಂಕ (ಟೋಲ್) ವಸೂಲಾತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ಹಿಂಸಾರೂಪ ಪಡೆಯಿತು. ಶಿವಸೇನೆಯ ಶಂಕಿತ ಕಾರ್ಯಕರ್ತರು ನಾಲ್ಕು ಸುಂಕ ವಸೂಲಾತಿ ಕೇಂದ್ರಗಳನ್ನು ಧ್ವಂಸಗೊಳಿಸಿದ್ದಾರೆ. ಈ ನಡುವೆ, ಸುಂಕ ವಸೂಲಾತಿ ಖಂಡಿಸಿ ಶಿವಸೇನೆಯು ಸೋಮವಾರ ಕೊಲ್ಹಾಪುರ ಬಂದ್ಗೆ ಕರೆ ನೀಡಿದೆ.
ಕೆಲವರು ವಶಕ್ಕೆ: ಸುಂಕ ವಸೂಲಾತಿ ಕೇಂದ್ರ-ಗಳನ್ನು ಧ್ವಂಸಗೊಳಿಸಿರುವ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿವಸೇನೆಯ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸುಂಕ ವಸೂಲಾತಿ ಕೇಂದ್ರಗಳನ್ನು ನಿರ್ವಹಿಸುವ ‘ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್’ ಕಂಪೆನಿ ಕಚೇರಿ ಮೇಲೂ ದಾಳಿ ನಡೆದಿದೆ
ಶಾಂತಿಗೆ ಮನವಿ: ಈ ಮಧ್ಯೆ, ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ.
ಸುಂಕ ವಸೂಲಾತಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ನಗರದ ನಿವಾಸಿಗಳು ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಂಕ ವಸೂಲಾತಿ ವಿರೋಧಿ ಸಮಿತಿಯ ಹತ್ತಕ್ಕೂ ಅಧಿಕ ಸದಸ್ಯರು ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮಹಾರಾಷ್ಟ್ರ ಗೃಹ ಸಚಿವ ಸಟೇಜ್ ಪಾಟೀಲ್ ಮತ್ತು ಕಾರ್ಮಿಕ ಸಚಿವ ಹಸನ್ ಮುಷ್ರಿಫ್ ಶನಿವಾರ ನಿರಶನ ನಡೆಸುತ್ತಿರುವವರನ್ನು ಭೇಟಿಯಾಗಿ ಸುಂಕ ವಸೂಲಾತಿ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ಭರವಸೆಯ ಹೊರತಾಗಿಯೂ ಭಾನುವಾರ ಸುಂಕ ವಸೂಲಾತಿ ಮುಂದುವರಿದಿದ್ದರಿಂದ ಹಿಂಸಾಚಾರ ಉಂಟಾಯಿತು ಎನ್ನಲಾಗಿದೆ.