ದೇವನಹಳ್ಳಿ: `ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ (ಜುಲೈ 20) ನಡೆಯಲಿರುವ ವಕೀಲರ ಭವನ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಕೂರಲು ದಾನಿ ರೊನಾಲ್ಡೊ ಕೊಲ್ಹಾಸೊ ಅವರಿಗೆ ಅವಕಾಶ ನೀಡಬಾರದು ಎಂದು ನಾಡಪ್ರಭು ಕೆಂಪೇಗೌಡ ಕನ್ನಡ ಸೇನೆ ಸಂಸ್ಥಾಪಕ ಅಧ್ಯಕ್ಷ ಬಿ.ಮುನೇಗೌಡ ಮನವಿ ಮಾಡಿದರು.
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ವಕೀಲರ ಭವನ ಉದ್ಘಾಟನೆ ಕಾರ್ಯಕ್ರಮವು ನ್ಯಾಯಾಂಗ, ಸರ್ಕಾರ ಹಾಗೂ ವಕೀಲರ ಸಂಘದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಹೈಕೋರ್ಟ್ ನ್ಯಾಯಾಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರು, ಮುಖ್ಯಮಂತ್ರಿ, ಸಚಿವರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಕೀಲರ ಭವನದ ನಿರ್ಮಾಣವು ರೊನಾಲ್ಡೊ ಕೊಲ್ಹಾಸೊ ಅವರ ಕೊಡುಗೆಯಾಗಿರುತ್ತದೆ. ಕೊಲ್ಹಾಸೊ ಅವರ ವಿರುದ್ಧ ಇದೇ ನ್ಯಾಯಾಲಯದಲ್ಲಿ ವಿವಿಧ ಸಿವಿಲ್ ಸ್ವರೂಪದ ಪ್ರಕರಣದ ವಿಚಾರಣೆ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕೊಲ್ಹಾಸೊ ಅವರು ಈ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ. ಸಂಘಟಕರು ಇದನ್ನು ಪರಿಶೀಲಿಸಬೇಕ' ಎಂದು ಮನವಿ ಮಾಡಿದರು.
`ಸಾಮಾಜಿಕ ಸೇವೆ ಹೆಸರಿನಲ್ಲಿ ವಿವಿಧ ಇಲಾಖೆಗೆ ದಾನ ನೀಡುವ ಮೂಲಕ ಸರ್ಕಾರದ ಪ್ರಮುಖ ಇಲಾಖೆಗಳ ಮೇಲೆ ಹಿಡಿತ ಸಾಧಿಸುವುದು ಕೊಲ್ಹಾಸೊ ಅವರ ಉದ್ದೇಶ. ಬಡವರ ಮತ್ತು ಸರ್ಕಾರಿ ಜಾಗಗಳನ್ನು ಬೇನಾಮಿ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಇತರರಿಗೆ ಮಾರಾಟ ಮಾಡುವುದೇ ಇವರ ಪ್ರವೃತ್ತಿ. ನ್ಯಾಯಾಲಯದಲ್ಲಿ ಇವರ ವಿರುದ್ಧ ಹಲವಾರು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇಂತಹ ವ್ಯಕ್ತಿಯನ್ನು ಹೊರತುಪಡಿಸಿ ಕಾರ್ಯಕ್ರಮ ನಡೆಸಿದರೆ ನಮ್ಮ ವಿರೋಧವಿಲ್ಲ' ಎಂದು ಅವರು ತಿಳಿಸಿದರು. ಯೋಗೀಶ ಗೌಡ, ರವಿ, ಸಂಪತ್ ಕುಮಾರ್, ನಾಗರಾಜ್, ಅರವಿಂದ್, ಅಪ್ಪಣ್ಣ, ಮಣಿ, ಗಜೇಂದ್ರ, ಪ್ರಶಾಂತ ಇದ್ದರು.