ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪದ ದಾರೆಪಡ್ಪು ಎಂಬಲ್ಲಿ ಕಳೆದ ಸಾಲಿನಲ್ಲಿ ನಿರ್ಮಿಸಿದ್ದ ಕಿಂಡಿ ಅಣೆಕಟ್ಟು ತಡೆಗೋಡೆ ಕುಸಿದಿದೆ. ನದಿಗೆ ಹಾಕಿದ ಕಿಂಡಿ ಅಣೆಕಟ್ಟು ಸಮೀಪದ ತಡೆಗೋಡೆ ಒಂದೆ ಸವನೇ ಹರಿಯುವ ಪ್ರವಾಹದ ನೀರಿನ ರಭಸಕ್ಕೆ ಸಿಕ್ಕಿ ಕುಸಿದಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ರೂ 20 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿಯನ್ನು ನಬಾರ್ಡ್ ಯೋಜನೆಯಲ್ಲಿ ಮಾಡಲಾಗಿತ್ತು. ಕಟ್ಟತ್ತಿಲ ಹೊಳೆಗೆ ಅಣೆಕಟ್ಟು ನಿರ್ಮಿಸಲಾಗಿದೆ. ಕಿರುಹೊಳೆ ಮುಂದಕ್ಕೆ ಕರೋಪಾಡಿ ಗ್ರಾಮದ ಆನೆಕಲ್ಲು ಹೊಳೆಗೆ ಸೇರಿಕೊಂಡು ಕೇರಳದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.
ದಾರೆಪಡ್ಪುವಿನಲ್ಲಿ ಕೃಷಿ ಭೂಮಿಯಿದ್ದು, ನದಿ ನೀರಿನಿಂದ ಅಪಾಯ ಇರುವುದನ್ನು ಗಮನಿಸಿ, ತಡೆಗೋಡೆ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದ ತಡೆಗೋಡೆ ಕುಸಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸುಭದ್ರ ಅಡಿಪಾಯವಿಲ್ಲದೇ ತಡೆಗೋಡೆ ಕುಸಿದಿರುವುದು ಸ್ಪಷ್ಟವಾಗಿದೆ. ಕಾಸರಗೋಡಿನ ಬೇವಿಂಜೆಯ ಗುತ್ತಿಗೆದಾರ ಅಮೂ ಹಾಜಿ ಕಾಮಗಾರಿ ಕೈಗೆತ್ತಿಕೊಂಡು 2010ರ ಜುಲೈ 8ರಂದು ಪೂರೈಸಿದ್ದಾರೆ. ಒಂದು ವರ್ಷದ ಅವಧಿಯಲ್ಲೇ ತಡೆಗೋಡೆ ಕುಸಿದಿರುವುದು ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿದೆ. 50 ಮೀಟರ್ ಉದ್ದದ ತಡೆಗೋಡೆಯ ಬಲಭಾಗದಲ್ಲಿ ಮತ್ತು ಎಡಭಾಗದಲ್ಲಿ ತಲಾ 8 ಮೀಟರ್ನಷ್ಟು ಕುಸಿದಿದೆ. ಇದೀಗ ಸಮೀಪದ ಎ.ಸಿ.ಮೊದುಕುಂಞಿ, ಅಬೂಬಕ್ಕರ್, ಖಾದ್ರಿ ಬ್ಯಾರಿ ಅವರ ಕೃಷಿ ಭೂಮಿ ಕೂಡಾ ಕುಸಿದು ಬೀಳುವ ಹಂತದಲ್ಲಿದೆ.
ನಿರಂತರ ಮಳೆ ಬರುತ್ತಿರುವುದರಿಂದ ಕುಸಿದ ತಡೆಗೋಡೆಯ ಕಾಮಗಾರಿಯನ್ನು ಸದ್ಯ ದುರಸ್ತಿ ಮಾಡಲು ಅಸಾಧ್ಯ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಕುಸಿದ ತಡೆಗೋಡೆ ದುರಸ್ತಿ ಮಾಡಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಹನೀಫ್ ಪ್ರತಿಕ್ರಿಯಿಸಿದ್ದಾರೆ.