‘ಬೆಮೆಲ್’ ಹೊರತುಪಡಿಸಿ ಯಾವುದೇ ಪ್ರಮುಖ ಕಾರ್ಖಾನೆಗಳಿಲ್ಲದ ಕೋಲಾರ ಜಿಲ್ಲೆ ಯಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪಿಸುವುದಾಗಿ 2011ರ ರೈಲ್ವೆ ಬಜೆಟ್ನಲ್ಲಿ ಘೋಷಿಸಲಾಯಿತು.
ಸ್ಥಳ ಗುರುತಿಸುವುದರಲ್ಲೇ ವರ್ಷ ಕಳೆಯಿತು. ನಂತರ 2012ರ ರೈಲ್ವೆ ಬಜೆಟ್ನಲ್ಲೂ ‘ಕೋಲಾರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆ’ ಮಾಡುವುದಾಗಿ ಘೋಷಿಸಿ ಅದಕ್ಕಾಗಿ 1200 ಎಕರೆ ಜಮೀನನ್ನು ಗುರುತಿಸಿ ರುವುದಾಗಿ ಪ್ರಕಟಿಸಲಾಯಿತು. ಆಗ ಸಿ.ಕೆ. ಜಾಫರ್ ಷರೀಫ್ ಅವರು ಬಜೆಟ್ ಕುರಿತು ‘ಕೋಲಾರಕ್ಕೆ ಪ್ರತಿ ವರ್ಷ ಕೋಚ್ ಕಾರ್ಖಾನೆ ಮಂಜೂರಾಗುತ್ತಲೇ ಇರುತ್ತದೆ’ ಎಂದು ವ್ಯಂಗ್ಯವಾಡಿದ್ದರು.
ಆ ವರ್ಷದಲ್ಲೂ ಪ್ರಯತ್ನ ಆಗಲಿಲ್ಲ. ಪುನಃ 2013ರ ಬಜೆಟ್ನಲ್ಲೂ ಕೋಚ್ ಕಾರ್ಖಾನೆ ಘೋಷಣೆ ಆಗಿದೆ. 2013ರ ರಾಜ್ಯ ಬಜೆಟ್ನಲ್ಲಿಯೂ ಕೋಲಾರದಲ್ಲಿ ರೈಲ್ವೆ ಕೋಚ್ ಕಾರ್ಖಾನೆಗೆ ಅಗತ್ಯವಾದ ಭೂಮಿ ಹಾಗೂ ತನ್ನ ಪಾಲಿನ ಹಣ ಬಿಡುಗಡೆ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ.
ಒಂದು ಕಾರ್ಖಾನೆ ಸ್ಥಾಪನೆಗಾಗಿ ಇನ್ನೆಷ್ಟು ಬಜೆಟ್ಗಳು ಬರಬೇಕು? ಸುಮಾರು 5000 ಮಂದಿ ಉದ್ಯೋಗ ನೀಡುವ ಯೋಜನೆ ಆರಂಭವಾದಲ್ಲಿ ನಿರಂತರ ಬರಗಾಲಕ್ಕೆ ತುತ್ತಾಗಿ ಅಂತರ್ಜಲದ ಮಟ್ಟ 1500 ಅಡಿ ಆಳ ತಲುಪಿರುವ ಬರಡು ಪ್ರದೇಶದ ಒಂದಿಷ್ಟು ಮಂದಿಗೆ ಉದ್ಯೋಗ ಸಿಗುವ ಭರವಸೆ ಇತ್ತು. ಆದರೆ ಈಡೇರಿಲ್ಲ. ಇದಕ್ಕೆ ರೈಲ್ವೆ ಸಚಿವರ ಅವಕೃಪೆಯೋ, ರಾಜ್ಯ ಸರ್ಕಾರದ ನಿರಾಸಕ್ತಿಯೋ, ಈ ಯೋಜನೆಯ ರೂವಾರಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ವೈಫಲ್ಯವೋ ಗೊತ್ತಿಲ್ಲ.