ಬ್ರಹ್ಮಾವರ: ಕೋಟದ ಡಾ.ಕಾರಂತ ಕಲಾಭವನದಲ್ಲಿ ಕಾರಂತ ಸಂಸ್ಮರಣೆ, ಗೀತನಮನ ಮತ್ತು ಅಂಧ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಂದಾಪುರದ ಉದ್ಯಮಿ ಕೋಟ ಇಬ್ರಾಹಿಂ ಸಾಹೇಬ್ ಮಾತನಾಡಿ ಮಕ್ಕಳ ಬಗ್ಗೆ ಅಪಾರ ಪ್ರೀತಿಯನ್ನಿಟ್ಟು ಡಾ.ಕಾರಂತರು ಮಕ್ಕಳಿಗಾಗಿಯೇ ಬಾಲವನವನ್ನು ತೆರೆದರು. ಪ್ರಕೃತಿ, ಸಮಾಜದ ಬಗ್ಗೆ ಕಾಳಜಿ ಹೊಂದಿದ್ದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಅಧ್ಯಾಪಕ ನರೇಂದ್ರ ಕುಮಾರ ಕೋಟ ಮುಂದಿನ ಜನವರಿಯಿಂದ ಉಡುಪಿ ಜಿಲ್ಲೆಯ ಮಕ್ಕಳನ್ನು ಒಟ್ಟುಗೂಡಿಸಿ ಚುಕ್ಕಿ ಮಕ್ಕಳ ಕಲಾವೇದಿಕೆಯ ವತಿಯಿಂದ ಮಕ್ಕಳಿಗಾಗಿ ಮಕ್ಕಳೇ ನಿರ್ಮಿಸುವ 12 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜ.20ರಂದು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ, ಮಧ್ಯಾಹ್ನ ಗೀತೆ ಮತ್ತು ಪಠ್ಯದ ಬಗ್ಗೆ ಕಾರ್ಯಾಗಾರ ನಡೆಯಲಿದೆ ಎಂದು ಹೇಳಿದರು.
ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ತಿಂಗಳಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ನ ಅಧ್ಯಕ್ಷ ಸಿ.ಚಂದ್ರ ನಾಯರಿ, ಕೋಟ ಪ್ರಜ್ಞಾ ಟ್ಯುಟೋರಿಯಲ್ ವಿದ್ಯಾ ಸಂಸ್ಥೆಯ ಪ್ರಕಾಶ್ ಭಟ್, ಚುಕ್ಕಿ ಚಿಣ್ಣರ ಬಳಗದ ಉತ್ತಮ್ ಪ್ರಭು, ಸ್ವಾತಿ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ನಂತರ ಶಿರಸಿಯ ಸ್ಪಂದನ ಅನ್ನಪೂರ್ಣೇಶ್ವರೀ ಕಲಾತಂಡದ 10 ಮಂದಿ ಅಂಧ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟದ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿಯ ಸಾರಥ್ಯದಲ್ಲಿ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್, ಜೇಸಿ ಕಲ್ಯಾಣಪುರ, ಸಮರ್ಪಣಾ ಕೋಟ, ಮಣೂರಿನ ಅಶ್ವಿನಿ ಕೇಂದ್ರ, ಕೋಟದ ಪ್ರಜ್ಞಾ ವಿದ್ಯಾಸಂಸ್ಥೆ ಆಯೋಜಿಸಿದ್ದವು.