ತುಮಕೂರು: ಸಿದ್ದಗಂಗಾ ಮಠದ ಆವರಣದಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಅತಿ ಎತ್ತರದ ಕೋಟಿ ಶಿವಲಿಂಗ ನಿರ್ಮಾಣ ಕಾರ್ಯವನ್ನು ಕೈಬಿಡಲು ಮಠ ಮುಂದಾಗಿದೆ.
ಶಿವಲಿಂಗ ನಿರ್ಮಾಣ ವಿಚಾರದಲ್ಲಿ ರಾಜಕೀಯ ಬೆರೆತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಕೋಟಿಲಿಂಗೇಶ್ವರ ಪ್ರತಿಷ್ಠಾಪನಾ ಸಮಿತಿ ರಚಿಸಿಕೊಂಡಿದ್ದು, ಅದರ ಅಧ್ಯಕ್ಷರಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಇದ್ದರು. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಶಿವರಾತ್ರಿಯಂದು ಮಠದ ಆವರಣದಲ್ಲಿ ಶಿವಲಿಂಗ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದರು.
ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಹ್ವಾನಿಸದಿರುವುದು ಸಾಕಷ್ಟು ಚರ್ಚೆಗೆ, ಕೆಲವರಿಂದ ಆಕ್ಷೇಪಕ್ಕೆ ಒಳಗಾಗಿತ್ತು.
ಲಿಂಗಾಯತ ಸಮುದಾಯವನ್ನೇ ಒಡೆಯುವವರಿಗೆ ಮಠದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶ ನೀಡಬಾರದು ಎಂದು ಯಡಿಯೂರಪ್ಪ ಅವರು ಶಿವಕುಮಾರ ಸ್ವಾಮೀಜಿ ಅವರಿಗೆ ಪತ್ರ ಬರೆದಿದ್ದರು.