ನವದೆಹಲಿ (ಪಿಟಿಐ): ದೆಹಲಿ ವಿಧಾನಸಭೆ ಚುನಾವಣೆಯ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತವಾಗಿರುವ ಆಮ್ ಆದ್ಮಿ ಪಕ್ಷ (ಎಎಪಿ) ರಾಷ್ಟ್ರವ್ಯಾಪಿ ಸದಸ್ಯತ್ವ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನವರಿ 26ಕ್ಕೆ ಮೊದಲು ದೇಶದಾದ್ಯಂತ ಒಂದು ಕೋಟಿ ಸದಸ್ಯರನ್ನು ನೋಂದಣಿ ಮಾಡಿಕೊಳ್ಳುವ ಗುರಿಯನ್ನು ಎಎಪಿ ಹೊಂದಿದೆ.
‘ಮೈ ಭೀ ಆಮ್ ಆದ್ಮಿ’ ಅಭಿಯಾನದ ಭಾಗವಾಗಿ ದೇಶದ ಯಾವುದೇ ವ್ಯಕ್ತಿ ಸದಸ್ಯತ್ವಕ್ಕಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಭಾರತದ ಯಾವುದೇ ಪ್ರಜೆ 07798220033 ಸಂಖ್ಯೆಗೆ ಕರೆ ಮಾಡುವ ಮೂಲಕ (ಮಿಸ್ ಕಾಲ್) ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಹಾಗೆಯೇ ಈ ಸಂಖ್ಯೆಗೆ ಹೆಸರು, ಎಸ್ಟಿಡಿ ಕೋಡ್, ವಿಧಾನ ಸಭಾ ಕ್ಷೇತ್ರದ ಹೆಸರನ್ನು ಎಸ್ಎಂಎಸ್ ಮಾಡುವ ಮೂಲಕವೂ ಸದಸ್ಯತ್ವಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಪಕ್ಷದ ಜಾಲತಾಣದಲ್ಲಿಯೂ ನೋಂದಣಿಗೆ ಅವಕಾಶ ಇದೆ ಎಂದರು.
ಭಾರಿ ಸ್ಪಂದನೆ: ಆಂದೋಲನ ಆರಂಭಿಸಿ ಮೊದಲ ಮೂರು ತಾಸುಗಳಲ್ಲಿಯೇ 47,500 ಜನರು ಜಾಲತಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಎಎಪಿ ಹೇಳಿದೆ.
ಹಲ್ಲೆ: ದಕ್ಷಿಣ ದೆಹಲಿಯಲ್ಲಿ ಸದಸ್ಯತ್ವ ಅಭಿಯಾನದಲ್ಲಿ ತೊಡಗಿದ್ದ ಎಎಪಿಯ ಇಬ್ಬರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ತಂಡದಲ್ಲಿ ಹತ್ತು ಜನರಿದ್ದರು ಎನ್ನಲಾಗಿದೆ.
ಕೇಜ್ರಿವಾಲ್ ಅವರಿಗೆ ಭದ್ರತೆ
ನವದೆಹಲಿ (ಪಿಟಿಐ): ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅರಿವಿಗೆ ಬಾರದಂತೆಯೇ ಅವರಿಗೆ ಭದ್ರತೆ ಒದಗಿಸಲಾಗುತ್ತಿದೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಕೇಜ್ರಿವಾಲ್ ಅವರು ಮತ್ತೆಮತ್ತೆ ಭದ್ರತೆಯನ್ನು ತಿರಸ್ಕರಿಸಿದರೂ ಅತಿ ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ಸುರಕ್ಷತೆ ಅಗತ್ಯಗಳಿಗೆ ಅನುಗುಣವಾಗಿ ಹಾಗೂ ಅವರು ಎದುರಿಸುತ್ತಿರುವ ಅಪಾಯದ ಆಧಾರದಲ್ಲಿ ಭದ್ರತೆ ಒದಗಿಸುವುದು ಸರ್ಕಾರ ಮತ್ತು ಗೃಹ ಸಚಿವಾಲಯದ ಕರ್ತವ್ಯ ಎಂದು ಶಿಂಧೆ ತಿಳಿಸಿದ್ದಾರೆ.
ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೂಡಲೇ ಅವರಿಗೆ ಭದ್ರತೆ ಒದಗಿಸಲಾಗಿದೆ. ಅವರ ಅರಿವಿಗೆ ಬಾರದಂತೆಯೇ ಭದ್ರತೆ ಒದಗಿಸಲಾಗಿದೆ ಎಂದು ಶಿಂಧೆ ಹೇಳಿದ್ದಾರೆ.
ದೆಹಲಿ ಪೊಲೀಸರು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕೇಜ್ರಿವಾಲ್ ಸಮೀಪದ ಗಾಜಿಯಾಬಾದ್ನಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೂ ದೆಹಲಿ ಆಯುಕ್ತರು ಚರ್ಚೆ ನಡೆಸಿದ್ದಾರೆ. ಎಎಪಿಯ ಕಚೇರಿಯೂ ಅಲ್ಲಿ ಇರುವುದರಿಂದ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.