ಕನಕಪುರ ಮುಖ್ಯ ರಸ್ತೆಯ ಕೋಣನಕುಂಟೆ ಕ್ರಾಸ್ ನಿಂದ ಆರಂಭವಾಗಿ ಜೆಪಿ ನಗರ 9ನೇ ಫೇಸ್ (ವಿನಾಯ ಚಿತ್ರಮಂದಿರ)ದ ವರೆಗೆ ತುಂಬಾ ಚೆನ್ನಾಗಿದ್ದ ರಸ್ತೆಯ ಎರಡು ಬದಿಗಳನ್ನು ಕೇಬಲ್ ಹಾಕಲು ಅಗೆದು, ಸರಿಯಾಗಿ ಮುಚ್ಚದೆ ಇಡೀ ರಸ್ತೆಯನ್ನು ಹದಗೆಡಿಸಿದ್ದಾರೆ.
ರಸ್ತೆಯ ತುಂಬಾ ಕಲ್ಲುಗಳು ಹರಡಿಕೊಂಡಿದೆ. ಪಾದಚಾರಿಗಳಿಗೆ ಓಡಾಡಲು ತುಂಬಾ ಕಷ್ಟವಾಗಿದೆ. ವಾಹನಗಳು ಚಲಿಸುವಾಗ ಚಕ್ರಕ್ಕೆ ಸಿಕ್ಕಿ ಸಿಡಿಯುವ ಕಲ್ಲುಗಳು ಜನರಿಗೆ ಬಡಿದು ಗಾಯಗಳಾದ ಸಂದರ್ಭಗಳು ಇವೆ. ಅಗೆದಿರುವ ರಸ್ತೆಯ ಕಲ್ಲುಗಳು ರಸ್ತೆಯ ಮೇಲೆ ಹರಡದಂತೆ ಭದ್ರವಾಗಿ ಟಾರ್ ಹಾಕಬೇಕಾಗಿದೆ.
ಇದೇ ರಸ್ತೆಯ ಸೌಧಾಮಿನಿ ಕಲ್ಯಾಣ ಮಂಟಪದ ಪಕ್ಕದ ಮುಖ್ಯ ರಸ್ತೆಯಲ್ಲಿ ಓಡಾಡಲು ಜಾಗವಿಲ್ಲದಂತೆ ವ್ಯಾಪಾರಸ್ಥರು ಮುಖ್ಯ ರಸ್ತೆಯನ್ನೇ ಆಕ್ರಮಿಸಿಕೊಂಡಿದ್ದಾರೆ.
ಸೌಧಾಮಿನಿ ಬಳಿಯಿರುವ ಬಸ್ ನಿಲ್ದಾಣದಲ್ಲಿ ಜನರು ಬಸ್ ನಿಂದ ಇಳಿಯಲು ಜಾಗವಿಲ್ಲದಂತೆ ರಸ್ತೆಯ ಅಂಚಿಗೆ ಹೂವಿನ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೂಕ್ತಕ್ರಮ ತೆಗೆದು ಕೊಳ್ಳುತ್ತಾರೆಂದು ನಿರೀಕ್ಷಿಸುತ್ತಿದ್ದೇವೆ.