ನವದೆಹಲಿ (ಪಿಟಿಐ): ಸಾಕಷ್ಟು ವಿಳಂಬದ ನಂತರ ಕೋಮು ಹಿಂಸೆ ತಡೆ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಮಸೂದೆಯಿಂದ ಕೆಲವು ಅಂಶಗಳನ್ನು ತೆಗೆದು ಹಾಕಲಾಗಿದೆ. ಕಾನೂನಿನ ಪಾತ್ರವನ್ನು ಗಲಭೆ ನಿಯಂತ್ರಣಕ್ಕೆ ಸೀಮಿತಗೊಳಿಸಲಾಗಿದೆ. ಗಲಭೆಯಲ್ಲಿ ತೊಡಗುವ ಸಮುದಾಯಗಳ ಬಗ್ಗೆ ಕಾನೂನು ತಟಸ್ಥ ಧೋರಣೆ ತಾಳಲಿದೆ.
ಪ್ರತಿಪಕ್ಷ ಬಿಜೆಪಿ ಮತ್ತು ಇತರ ಕೆಲವು ಪಕ್ಷಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿರುವ ಮಸೂದೆ ಮಂಗಳವಾರ ಸಂಸತ್ತಿನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಆರಂಭದಲ್ಲಿ ಗಲಭೆಯ ಹೊಣೆಯನ್ನು ಬಹುಸಂಖ್ಯಾತ ಸಮುದಾಯದ ಮೇಲೆ ಹೊರಿಸುವಂತೆ ಮಸೂದೆ ರಚಿಸಲಾಗಿತ್ತು. ಆದರೆ ಬಿಜೆಪಿ ಮತ್ತು ಇತರ ಕೆಲವು ಪಕ್ಷಗಳ ತೀವ್ರ ವಿರೋಧದಿಂದಾಗಿ ಈ ಅಂಶವನ್ನು ತಿದ್ದುಪಡಿ ಮಾಡಲಾಗಿದ್ದು, ಈಗ ಮಸೂದೆ ಕೋಮು ತಟಸ್ಥ ಧೋರಣೆ ಹೊಂದಿದೆ.
ಪರಿಷ್ಕೃತ ಮಸೂದೆಯಲ್ಲಿ, ಗಲಭೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶದ ಅಧಿಕಾರವನ್ನು ಕೂಡ ಮೊಟಕುಗೊಳಿಸಲಾಗಿದೆ. ಪ್ರಸ್ತುತ ಮಸೂದೆ ಪ್ರಕಾರ, ರಾಜ್ಯ ಸರ್ಕಾರ ಬೇಡಿಕೆ ಮುಂದಿಟ್ಟರೆ ಮಾತ್ರ ಗಲಭೆ ನಿಯಂತ್ರಣಕ್ಕೆ ರಕ್ಷಣಾ ಪಡೆಗಳನ್ನು ನಿಯೋಜಿಸುವ ಅಧಿಕಾರ ಕೇಂದ್ರಕ್ಕೆ ದೊರೆಯುತ್ತದೆ.
ಬಿಜೆಪಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರೋಧದ ಹಿನ್ನೆಲೆಯಲ್ಲಿ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ.