ನವದೆಹಲಿ(ಪಿಟಿಐ): ದೇಶದ ವಿವಿಧೆಡೆ ನಡೆದ ಕೋಮುಗಲಭೆ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡವರ ಧರ್ಮ ಹಾಗೂ ಮತ್ತಿತರ ವಿವರವನ್ನು ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಈಚೆಗೆ ನಡೆದ ಉತ್ತರ ಪ್ರದೇಶದ ಮುಜಫ್ಫರ್ನಗರ ಘಟನೆ ಸೇರಿದಂತೆ ಈವರೆಗೆ ದೇಶದಲ್ಲಿ ಒಟ್ಟು 479 ಕೋಮುಗಲಭೆ ಪ್ರಕರಣಗಳು ದಾಖಲಾಗಿದ್ದು, 66 ಮುಸ್ಲಿಂ ಹಾಗೂ 41 ಹಿಂದೂಗಳು ಸೇರಿ ಒಟ್ಟು 107 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವಾಲಯ ವಿವರಿಸಿದೆ.
ಉತ್ತರ ಪ್ರದೇಶವೊಂದರಲ್ಲೇ ಅತಿ ಹೆಚ್ಚು ಅಂದರೆ 62 ಜನರು ಸಾವಿಗೀಡಾಗಿದ್ದು, ಅವರಲ್ಲಿ 42 ಮಂದಿ ಮುಸ್ಲಿಂ ಹಾಗೂ 20 ಮಂದಿ ಹಿಂದೂಗಳು ಸೇರಿದ್ದಾರೆ. ಉತ್ತರ ಪ್ರದೇಶದಲ್ಲಿ 2013ರ ಮೊದಲ ಒಂಬತ್ತು ತಿಂಗಳು 93 ಕೋಮುಗಲಭೆ ಘಟನೆಗಳು ನಡೆದಿವೆ.
ಅಲ್ಲದೇ ಈ ಘಟನೆಗಳಲ್ಲಿ 1,697 ಜನರು ಗಾಯಗೊಂಡಿದ್ದು, ಅವರಲ್ಲಿ 794 ಹಿಂದೂ ಹಾಗೂ 703 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.