ನವದೆಹಲಿ (ಪಿಟಿಐ): ಕಾಂಗ್ರೆಸ್ ಮಿತ್ರ ಪಕ್ಷವಾದ ತೃಣಮೂಲ ಕಾಂಗ್ರೆಸ್, ಎನ್ ಡಿ ಎ ಮತ್ತು ಯುಪಿಯೆ ಹೊರತಾದ ಆಡಳಿತ ಇರುವ ರಾಜ್ಯಗಳ ಜೊತೆ ಸೇರಿ ಉದ್ದೇಶಿತ ಕೋಮು ಹಿಂಸೆ ಮಸೂದೆಯನ್ನು ವಿರೋಧಿಸಿದ್ದರಿಂದಾಗಿ ಯುಪಿಎ ಶನಿವಾರ ಇಕ್ಕಟ್ಟಿನಲ್ಲಿ ಸಿಲುಕಿತು.
ರಾಷ್ಟ್ರೀಯ ಭಾವೈಕ್ಯ ಮಂಡಳಿ (ಎನ್ ಐ ಸಿ) ಸಭೆಯಲ್ಲಿ ಶಾಸನವನ್ನು ~ಅಪಾಯಕಾರಿ~ ಮತ್ತು ರಾಷ್ಟ್ರದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹುದು ಎಂದು ತೃಣಮೂಲ ಕಾಂಗ್ರೆಸ್ ಜರೆಯಿತು.
ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎನ್ ಡಿ ಎ ಮತ್ತು ಅದರ ಆಡಳಿತ ಇರುವ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್ ಗಡ, ಕರ್ನಾಟಕ, ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ ಮತ್ತು ಪಂಜಾಬ್ ರಾಜ್ಯಗಳು ಕರಡು ಮಸೂದೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದವು.
ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ~ಉದ್ದೇಶಿತ ಶಾಸನವು ಕೋಮುವಾದವನ್ನು ನಿಗ್ರಹಿಸುವ ಬದಲು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ವಿಭಜನೆಯನ್ನು ಪ್ರೋತ್ಸಾಹಿಸುವುದರಿಂದ ಅತ್ಯಂತ ಅಪಾಯಕಾರಿ~ ಎಂದು ತರಾಟೆಗೆ ತೆಗೆದುಕೊಂಡರು.
ಯುಪಿಎಯ ಪ್ರಮುಖ ಅಂಗಪಕ್ಷವಾದ ತೃಣಮೂಲ ಕಾಂಗ್ರೆಸ್ ನ ಹಿರಿಯ ಧುರೀಣ ದಿನೇಶ ತ್ರಿವೇದಿ ಅವರೂ ಹಾಲಿ ರೂಪದ ಮಸೂದೆಯನ್ನು ತಮ್ಮ ಪಕ್ಷವೂ ವಿರೋಧಿಸುವುದು ಎಂದು ಹೇಳಿದರು.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (ಬಿಜೆಡಿ), ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ (ಬಿಎಸ್ಪಿ) ಅವರೂ ಮಸೂದೆಯನ್ನು ವಿರೋಧಿಸಿದರು. ಮಾಯಾವತಿ ಅವರ ಗೈರು ಹಾಜರಿಯಲ್ಲಿ ಅವರ ಹೇಳಿಕೆಯನ್ನು ಓದಿ ಹೇಳಲಾಯಿತು.