`ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಬೇಕು, ಅವರಿಗೆ ಸೂಕ್ತ ಸೇವೆಯನ್ನು ಸುಲಭವಾಗಿ ಒದಗಿಸಬೇಕು ಜೊತೆಗೆ ನಮ್ಮ ವಾಣಿಜ್ಯ ಉದ್ದೇಶವೂ ಕೈಗೂಡಬೇಕು ಹೀಗೆ ಹಲವು ಆಶಯಗಳನ್ನು ಇಟ್ಟುಕೊಂಡು ಇಲ್ಲಿ ಮಳಿಗೆಯನ್ನು ಹೊರತಂದಿದ್ದೇವೆ~ ಎಂದು ತಮ್ಮ ಮಾತುಗಳನ್ನು ಹಂಚಿಕೊಂಡವರು ಹೋಂಡಾ ಮೋಟಾರ್ ಸ್ಕೂಟರ್ ಇಂಡಿಯಾ ಪ್ರೈ. ಲಿ.ನ ದಕ್ಷಿಣ ವಿಭಾಗದ ಮುಖ್ಯಸ್ಥ ಮಕೊಟೊ ಯೊಷಿ.
ನಗರದಲ್ಲಿ ಹೋಂಡಾ ಮೋಟಾರ್ ಸ್ಕೂಟರ್ ಇಂಡಿಯಾ ಇತ್ತೀಚೆಗಷ್ಟೆ ತನ್ನ 9ನೇ ಮಳಿಗೆಯನ್ನು ತೆರೆಯಿತು. ಬೆಂಗಳೂರಿನ ರಾಜಾ ಗೃಹ ನಿರ್ಮಾಣ ಸಂಸ್ಥೆ ಕೋರಮಂಗಲದ ಹೊಸೂರು ರಸ್ತೆಯಲ್ಲಿ ಅತಿ ಸುಸಜ್ಜಿತವಾತ ಮತ್ತು ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಹೋಂಡಾ ಮಳಿಗೆಯನ್ನು ನಿರ್ಮಿಸಿದೆ.
ಹೋಂಡಾದ ರೀಟೇಲ್ ಮಳಿಗೆ ರಾಜಾ ಹೋಂಡಾವನ್ನು ಇತ್ತೀಚೆಗೆ ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರೂ ಹಾಜರಿದ್ದರು. ತಾವೂ ಅಲ್ಲಿದ್ದ ಹೋಂಡಾ ಬೈಕನ್ನೇರಿ ಒಂದಷ್ಟು ಹೊತ್ತು ಕಾಲ ಕಳೆದರು.
ಹೋಂಡಾ ಕಂಪನಿ ತನ್ನ ಮೂರನೇ ಘಟಕವನ್ನು ಕರ್ನಾಟಕದಲ್ಲಿ ತೆರೆಕಾಣಿಸುತ್ತಿರುವುದು ಸಂತಸದ ಸಂಗತಿ. ಇದು 1.2 ದಶಲಕ್ಷ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. 2013ರವೇಳೆಗೆ ಮೂರನೇ ತಯಾರಿಕಾ ಘಟಕ ಕಾರ್ಯಾರಂಭ ಮಾಡಿದ ನಂತರ ಒಟ್ಟಾರೆ ಭಾರತದಲ್ಲಿ 40ಲಕ್ಷ ವಾಹನ ತಯಾರಿಸುವ ಸಾಮರ್ಥ್ಯ ಹೊಂದಲಿದೆ ಎಂದು ಸಂತಸ ಹಂಚಿಕೊಂಡರು ಮಕೊಟೊ ಯೋಷಿ.
ಇದೇ ಸಂದರ್ಭದಲ್ಲಿ ಆರ್. ಅಶೋಕ್ ಹೋಂಡಾದ ಮೊದಲ ಐದು ಗ್ರಾಹಕರಿಗೆ ಕೀಗಳನ್ನು ಹಸ್ತಾಂತರಿಸಿದರು.