ಬೆಂಗಳೂರು: `ಕೋರ್ ಸಮಿತಿ~ಯ ವ್ಯಾಪ್ತಿಯಲ್ಲಿರುವ ವಿಷಯಗಳನ್ನು ಹೊರತುಪಡಿಸಿ, ಸದಸ್ಯರು ವೈಯಕ್ತಿಕವಾಗಿ ನೀಡುವ ಹೇಳಿಕೆಗಳಿಗೆ ಅಣ್ಣಾ ತಂಡ ಜವಾಬ್ದಾರಿ ಹೊರುವುದಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, `ಜನ ಲೋಕಪಾಲ ಮಸೂದೆಯಂತಹ ವಿಷಯಗಳು ಮಾತ್ರ ಅಣ್ಣಾ ತಂಡದ `ಕೋರ್ ಸಮಿತಿ~ ವ್ಯಾಪ್ತಿಗೆ ಬರುತ್ತವೆ. ಅವುಗಳ ಹೊರತಾಗಿ ತಂಡದ ಸದಸ್ಯರು ಯಾವುದೇ ವೈಯಕ್ತಿಕ ಹೇಳಿಕೆ ನೀಡಿದರೂ ತಂಡದಿಂದ ಪ್ರತಿಕ್ರಿಯೆ ನೀಡಬಾರದು ಎಂಬ ನಿರ್ಧಾರಕ್ಕೆ ಬರಲಾಗಿದೆ~ ಎಂದರು.
ವಕೀಲ ಪ್ರಶಾಂತ್ ಭೂಷಣ್ ಅವರು ಅಣ್ಣಾ ತಂಡದ `ಕೋರ್ ಸಮಿತಿ~ಯಲ್ಲಿ ಮುಂದುವರಿಯುವುದಿಲ್ಲ ಎಂಬ ವದಂತಿ ಕುರಿತು ಪ್ರಶ್ನಿಸಿದಾಗ, `ಅಂತಹ ನಿರ್ಧಾರವೇನೂ ಆಗಿಲ್ಲ. ಈ ಬಗ್ಗೆ ಅಣ್ಣಾ ಅವರೊಂದಿಗೆ ನಾನು ಮಾತನಾಡಿದ್ದೇನೆ~ ಎಂದು ಉತ್ತರಿಸಿದರು.
`ಕಾಂಗ್ರೆಸ್ಗೆ ಮತ ಹಾಕಬೇಡಿ ಎಂಬ ನಿರ್ಧಾರದಿಂದ ಮತ್ತೊಂದು ರಾಜಕೀಯ ಪಕ್ಷಕ್ಕೆ ಲಾಭವಾಗುವುದಿಲ್ಲವೇ~ ಎಂಬ ಪ್ರಶ್ನೆಗೆ, `ಒಂದು ಪಕ್ಷವನ್ನು ವಿರೋಧಿಸಿದರೆ ಮತ್ತೊಂದು ಪಕ್ಷಕ್ಕೆ ಲಾಭವಾಗುತ್ತದೆ. ಆದ್ದರಿಂದಲೇ ಅರವಿಂದ್ ಕೇಜ್ರಿವಾಲ್ ಆರಂಭಿಸಿರುವ ಅಭಿಯಾನವನ್ನು ನಾನು ವಿರೋಧಿಸಿದ್ದೇನೆ~ ಎಂದರು.
ಹಣ ವಸೂಲಿ ಬಗ್ಗೆ ಎಚ್ಚರಿಕೆ: `ಭ್ರಷ್ಟಾಚಾರದ ವಿರುದ್ಧ ಭಾರತ (ಐಎಸಿ) ಸಂಘಟನೆಯ ಸದಸ್ಯರೆಂದು ಹೇಳಿಕೊಂಡ ಕೆಲವರು ನನ್ನ ಮತ್ತು ಪ್ರಶಾಂತ್ ಭೂಷಣ್ ಪರಿಚಯ ಹೇಳಿಕೊಂಡುವ ಹಣ ವಸೂಲಿ ಮಾಡುತ್ತಿರುವ ಮಾಹಿತಿ ಬಂದಿದೆ. ನಾವು ಯಾವುದೇ ವ್ಯಕ್ತಿಗಳಿಗೂ ಹಣ ಸಂಗ್ರಹಕ್ಕೆ ಸೂಚಿಸಿಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಹಣ ನೀಡಬಾರದು~ ಎಂದು ಮನವಿ ಮಾಡಿದರು.