ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿದ್ದ 2 ಮತ್ತು 3ನೇ ಖಾಸಗಿ ದೂರಿನ ಹಿನ್ನೆಲೆಯಲ್ಲಿ ಜಾಮೀನು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ಮೇಲಿನ ಆದೇಶ ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಲಯದ ಹೊರಗೆ ದೊಡ್ಡ ಪ್ರಮಾಣದ ಜನಸಂದಣಿ ಕಂಡುಬರಲಿಲ್ಲ. ಆದರೆ ನ್ಯಾಯಾಂಗಣದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಕೋರ್ಟ್ ಹಾಲ್ನಲ್ಲಿ ಇದ್ದ ಆರೋಪಿಗಳಲ್ಲಿ ಆತಂಕ ಮಡುಗಟ್ಟಿತ್ತು.
ಯಡಿಯೂರಪ್ಪ ಅವರು ಖುದ್ದಾಗಿ ಹಾಜರಿರುತ್ತಾರಾ ಎಂದು ಶನಿವಾರ ಬೆಳಿಗ್ಗೆ ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದ ಕೆಲವು ಸಾರ್ವಜನಿಕರು ಪರಸ್ಪರ ಪ್ರಶ್ನಿಸಿಕೊಳ್ಳುತ್ತಿದ್ದರು. ಆದರೆ ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ಅಳಿಯ ಸೋಹನ್ ಕುಮಾರ್ ಮತ್ತು ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಮತ್ತಿತರರು ಮಾತ್ರ ಹಾಜರಾದಾಗ ಜನರ ಕುತೂಹಲವೂ ಕೆಲ ಕಾಲ ತಣ್ಣಗಾದಂತಿತ್ತು.
ತೀರ್ಪಿನ ನಂತರ ಪ್ರಜ್ಞೆತಪ್ಪಿ ಬಿದ್ದಿದ್ದ ಕೃಷ್ಣಯ್ಯ ಶೆಟ್ಟಿ ಅವರನ್ನು `108~ (ಆರೋಗ್ಯ ಕವಚ) ಅಂಬುಲೆನ್ಸ್ನಲ್ಲಿ ಮಲಗಿಸುವ ಸಂದರ್ಭದಲ್ಲಿ ಅವರನ್ನು ನೋಡಲು ಕೆಲವು ಸಾರ್ವಜನಿಕರು ಕುತೂಹಲದಿಂದ ಮುಗಿಬಿದ್ದರು.