ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್ ಕಲಾಪ ಬಹಿಷ್ಕಾರ ಸಲ್ಲ

ವಕೀಲರಿಗೆ ಮುಖ್ಯನ್ಯಾಯಮೂರ್ತಿ ಸಲಹೆ
Last Updated 14 ಡಿಸೆಂಬರ್ 2012, 19:53 IST
ಅಕ್ಷರ ಗಾತ್ರ

ಬೆಂಗಳೂರು:`ಇಷ್ಟವಾಗದ ಆದೇಶಗಳು ಬಂದ ಸಂದರ್ಭಗಳಲ್ಲಿ ವಕೀಲರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಬಾರದು' ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಕಿವಿಮಾತು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಕೀಲರ ಪರಿಷತ್ತು ಶುಕ್ರವಾರ ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ರಾಜ್ಯದ ಹೈಕೋರ್ಟ್‌ಗೆ ಪ್ರತ್ಯೇಕ ವಕೀಲರ ಸಂಘ ಇರಬೇಕು. ಅದೇ ರೀತಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹಾಗೂ ಮೇಯೋಹಾಲ್‌ನಲ್ಲಿರುವ ನ್ಯಾಯಾಲಯಗಳಿಗೆ ಪ್ರತ್ಯೇಕ ವಕೀಲರ ಸಂಘ ಬೇಕು. ವೃತ್ತಿನಿರತ ವಕೀಲರಿಗೆ ಮಾತ್ರ ಅಲ್ಲಿ ಸದಸ್ಯತ್ವ ನೀಡಬೇಕು. ಆಗ ಸಂಘಗಳು ರಾಜಕೀಯ ಒತ್ತಡಗಳಿಂದ ಹೊರ ಬರಬಹುದು'  ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

`ಯಾವುದೇ ಸಂದರ್ಭದಲ್ಲೂ ನಾನು ಪೂರ್ವಗ್ರಹಗಳಿಗೆ ಒಳಗಾಗಿ ಅಥವಾ ಸ್ವಜನಪಕ್ಷಪಾತದಿಂದ ವರ್ತಿಸಿಲ್ಲ. ನನ್ನ ವೃತ್ತಿ ಜೀವನದ ಹೆಚ್ಚಿನ ಅವಧಿಯನ್ನು ವಕೀಲನಾಗಿ ಕಳೆದಿದ್ದೇನೆ. ವಕೀಲರ ಸಂಘದ ಬಗ್ಗೆ ನನಗೆ ಸಹಾನುಭೂತಿ ಇದೆ. ಆದರೆ ನ್ಯಾಯದಾನದ ಸಂದರ್ಭದಲ್ಲಿ ಈ ಸಹಾನುಭೂತಿ ಕೆಲಸ ಮಾಡುವುದಿಲ್ಲ' ಎಂದು ಹೇಳಿದರು.

ಹೈಕೋರ್ಟ್ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್ ಎಸ್.ವಿಜಯಶಂಕರ್, ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಾದ ಕೆ.ಎಂ. ನಟರಾಜ್ ಮತ್ತು ಸಜ್ಜನ್ ಪೂವಯ್ಯ, ವಕೀಲರ ಪರಿಷತ್ತಿನ ಅಧ್ಯಕ್ಷ ಮುನಿಯಪ್ಪ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಹಿರಿಯ ವಕೀಲರು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT