ನವದೆಹಲಿ (ಪಿಟಿಐ): ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ 11 ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದ ವ್ಯಕ್ತಿಯನ್ನು ಅಪರಾಧಿ ಎಂದು ಪ್ರಕಟಿಸಿದ ನ್ಯಾಯಾಧೀಶರು, ಪ್ರತಿ ವಿಚಾರಣೆ ಸಂದರ್ಭದಲ್ಲೂ ನ್ಯಾಯಾಲಯಕ್ಕೆ ಹಾಜರಾಗಿದ್ದೇ ಒಂದು ದಿನದ ಸಾದಾ ಶಿಕ್ಷೆಗೆ ಸಮ ಎಂದು ಆತನನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.
ದೆಹಲಿಯ ನಿವಾಸಿ, ಶಿಕ್ಷಕ ಲಲಿತ್ ಕುಮಾರ್ ತಾನು ಮಾಡಿದ ತಪ್ಪಿಗೆ ಕ್ಷೆಮೆ ಯಾಚಿಸಿದ್ದಾನೆ. ಅಲ್ಲದೆ ಆತ ಕುಟುಂಬದ ಏಕೈಕ ಆದಾಯ ಮೂಲದ ವ್ಯಕ್ತಿಯಾಗಿರುವುದರಿಂದ ಜೈಲಿಗೆ ಕಳುಹಿಸದೆ ಬಿಡುಗಡೆ ಮಾಡಲಾಗುತ್ತಿದೆ ಎಂದು ನ್ಯಾಯಾಧೀಶ ಜಗಮಿಂದರ್ ಸಿಂಗ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕಳೆದ 11 ವರ್ಷಗಳಿಂದ ವಿಚಾರಣೆ ಎದುರಿಸಿದ್ದು ಪ್ರತಿ ಬಾರಿ ನ್ಯಾಯಾಲಯಕ್ಕೆ ಹಾಜರಾಗಿರುವುದನ್ನು ಒಂದು ದಿನದ ಸಾದಾ ಶಿಕ್ಷೆಗೆ ಸಮ ಎಂದು ಭಾವಿಸಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಲಲಿತ್ ಅಪಾಯಕಾರಿ ಆಯುಧ ಬಳಿಸಿ ಮೋಹನ್ ಕುಮಾರ್ ಎಂಬವರ ಮೇಲೆ ಹಲ್ಲೆ ಮಾಡಿದ್ದರು ಎಂದು ದೋಷಾರೋಪ ಹೊರಿಸಲಾಗಿತ್ತು. ಲಲಿತ್ ಹಲ್ಲೆ ಮಾಡಿದ್ದು ನಿಜ, ಆದರೆ ಅಪಾಯಕಾರಿ ಆಯುಧ ಬಳಸಿದ್ದರು ಎಂಬುದಕ್ಕೆ ಪುರಾವೆ ಇಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.