ಸಿದ್ದಾಪುರ: `ತಾಲ್ಲೂಕಿನ ಕೋಲ ಸಿರ್ಸಿಯ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬರುವ ವರ್ಷದಿಂದ ವಿಜ್ಞಾನ ವಿಭಾಗ ನೀಡಲು ಸಿದ್ಧ~ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು.
ಮಂಗಳವಾರ ಸ್ಥಳೀಯ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, `ಈ ಕಾಲೇಜಿಗೆ ವಿಜ್ಞಾನ ವಿಭಾಗ ನೀಡಲು ತೊಂದರೆಯಿಲ್ಲ. ನನ್ನದೇ ಕೈ,ನನ್ನದೇ ಸಹಿ.ಆದರೆ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿರಬೇಕು~ ಎಂದು ಸ್ಪಷ್ಟಪಡಿಸಿದರು.
`ವಿದ್ಯಾರ್ಥಿಗಳಿಗೆ ಬರುವ ದಿನಗಳು ಸರಳವಾಗಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಪಠ್ಯ ಮತ್ತು ಪಠ್ಯೇತರವನ್ನು ಗಂಭೀರ ವಾಗಿ ಪರಿಗಣಿಸದಿದ್ದಲ್ಲಿ ಸಮಸ್ಯೆ ಎದುರಿ ಸಬೇಕಾಗುತ್ತದೆ. ಈಗ ಉದ್ಯೋಗ ಸಿಗುವದು ಸುಲಭವಾಗಿಲ್ಲ~ ಎಂದು ಎಚ್ಚರಿಕೆ ನೀಡಿದ ಸಚಿವರು, ತಾವು ಮೂರು ಸಾವಿರ ಶಿಕ್ಷಕರ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಿದಾಗ ಒಂದೂವರೆ ಲಕ್ಷ ಅರ್ಜಿಗಳು ಬಂದಿದ್ದವು ಎಂದರು.
ಇದೇ ಸಂದರ್ಭದಲ್ಲಿ ನೂತನ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ, ಮಾರಾಟ ಮಳಿಗೆ, ಪ್ರೌಢಶಾಲೆಯ ಬಿಸಿ ಯೂಟದ ಕೋಣೆ ಮತ್ತು `ಇಗೋಡೆ~ಯ ಉದ್ಘಾಟನೆ ನೆರವೇರಿ ಸಿದ ಅವರು, ಆಸ್ಪತ್ರೆಯ ಕಟ್ಟಡ ಮತ್ತು ಇತರ ಸೌಲಭ್ಯಗಳ್ನು ಸರ್ಕಾರ ನೀಡುತ್ತದೆ. ಆದರೆ ಸರ್ಕಾರಿ ಸೇವೆಗೆ ವೈದ್ಯರು ಮಾತ್ರ ಬರುತ್ತಿಲ್ಲ. ಆದ್ದರಿಂದ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಪಡೆದವರು ಗ್ರಾಮೀಣ ಭಾಗ ದಲ್ಲಿ ಸೇವೆ ಸಲ್ಲಿಸುವದನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದ್ದೇವೆ ಎಂದರು.
ಪಟ್ಟಣದ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಈಗಿನ ಕಟ್ಟಡದ ಮೊದಲ ಮಹಡಿ ನಿರ್ಮಾ ಣಕ್ಕೆ ಅಂದಾಜು ಪತ್ರಿಕೆ ಸಿದ್ಧಗೊಳ್ಳು ತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾ ನಾಯ್ಕ, ಪ.ಪಂ.ಅಧ್ಯಕ್ಷ ಕೆ.ಜಿ. ನಾಯ್ಕ, ತಾ.ಪಂ.ಅಧ್ಯಕ್ಷೆ ಶಾಂತಿ ಹಸ್ಲರ್, ಉಪಾಧ್ಯಕ್ಷ ಪ್ರಸನ್ನ ಹೆಗಡೆ, ಸದಸ್ಯ ನೀಲಕಂಠ ಗೌಡರ್,ಎಪಿಎಂಸಿ ಸದಸ್ಯ ವಾಸು ನಾಯ್ಕ, ಎಸ್ಡಿಎಂಸಿ ಉಪಾಧ್ಯಕ್ಷ ಮಾದೇವ ನಾಯ್ಕ, ಸಹಕಾರಿ ಸಂಘದ ಅಧ್ಯಕ್ಷ ವಿನಾಯಕ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಅಧ್ಯಕ್ಷೆ ಉಮಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಚಾರ್ಯ ಕೆ. ಶಾಮಣ್ಣ ಸ್ವಾಗತಿಸಿದರು. ಲಲಿತಲಕ್ಷ್ಮಿ ಭಟ್ಟ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.