ಕೋಲಾರ: ನಗರದಲ್ಲಿ ಶನಿವಾರ ಸಾಮೂಹಿಕ ಗಣೇಶ ವಿಸರ್ಜನೆ ಸಂಭ್ರಮ ಮೇರೆ ಮೀರಿತ್ತು. ಗಣಪತಿಗೆ ಜೈಕಾರ ಮುಗಿಲು ಮುಟ್ಟಿತ್ತು.
ನಗರದ ಎಂ.ಜಿ.ರಸ್ತೆಯಿಂದ ಆರಂಭವಾದ ಮೆರವಣಿಗೆಯಲ್ಲಿ ವೈವಿಧ್ಯಮಯ ಗಣಪನ ಮೂರ್ತಿಗಳೊಡನೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಅವರೊಡನೆ ವಿವಿಧ ಕಲಾ ಮೇಳಗಳು ಪಾಲ್ಗೊಂಡು ಮೆರುಗು ಹೆಚ್ಚಿಸಿದವು. ಕಲಾವಿದರೊಡನೆ ಮಂಗಳಮುಖಿಯರೂ ಪಾಲ್ಗೊಂಡರು. ತಮಟೆ ವಾದ್ಯದ ಸದ್ದಿಗೆ ಕುಣಿದವರು ವಿಶೇಷ ಗಮನ ಸೆಳೆದರು.
ಮೆರವಣಿಗೆ ಎಂ.ಜಿ.ರಸ್ತೆ, ದೊಡ್ಡಪೇಟೆ ರಸ್ತೆ, ಮೆಕ್ಕೆ ವೃತ್ತ, ಬಂಗಾರಪೇಟೆ ರಸ್ತೆ, ಬಾಲಕರ ಕಾಲೇಜು ವೃತ್ತದ ಮೂಲಕ ಇಟಿಸಿಎಂ ಆಸ್ಪತ್ರೆ ಎದುರು ಸಮಾವೇಶಗೊಂಡಿತು. ಅಲ್ಲಿ ನಗರಸಭೆ ವತಿಯಿಂದ ನಿರ್ಮಿಸಲಾಗಿದ್ದ ತೊಟ್ಟಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಯಿತು. ಮಧ್ಯಾಹ್ನ 1 ಗಂಟೆ ವೇಳೆಗೆ ಶುರುವಾದ ಮೆರವಣಿಗೆ, ವಿಸರ್ಜನೆ ಕಾರ್ಯಕ್ರಮ ರಾತ್ರಿ 7.30 ದಾಟಿದ್ದರೂ ಕೊನೆಗೊಂಡಿರಲಿಲ್ಲ.
ಬಂದೋಬಸ್ತ್: ಕಾರ್ಯಕ್ರಮದ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಚಿವ ಆರ್.ವರ್ತೂರು ಪ್ರಕಾಶ್, ಜಿಲ್ಲಾಧಿಕಾರಿ ಮನೋಜ್ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ಪ್ರಯುಕ್ತ ಎಂ.ಜಿ.ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿತ್ತು.