ಕೋಲಾರ: ನಗರದಲ್ಲಿ ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ. ಶಿವ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ, ಪೂಜೆಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಕೆಲವು ದೇವಾಲಯಗಳಲ್ಲಿ ಜಾಗರಣೆ ಸಲುವಾಗಿ ವಿಶೇಷ ಉಪನ್ಯಾಸ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಂಗೋಲಿ ಸ್ಪರ್ಧೆ ಮತ್ತು ಮಡಿಕೆ ಒಡೆಯುವ ಸ್ಪರ್ಧೆಗಳು ನಡೆದಿದ್ದು ವಿಶೇಷ.
ಅಭಿಷೇಕ ಪ್ರಿಯನಾದ ಶಿವನಿಗೆ ದೇವಾಲಯಗಳಲ್ಲಿ ವಿವಿಧ ರೀತಿಯ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. ಅದನ್ನು ವೀಕ್ಷಿಸಲೆಂದೇ ಭಕ್ತರು ಸಾಲುಗಟ್ಟಿದ್ದು ಮತ್ತೊಂದು ವಿಶೇಷ.
ಹಬ್ಬಗಳಲ್ಲೇ ಶಿವರಾತ್ರಿ ಅತ್ಯಂತ ಸರಳವಾದ ಹಬ್ಬ. ಈಶ್ವರ ಮತ್ತು ಅವನ ಕುಟುಂಬ ಸರಳತೆ, ಶಾಂತಿ, ಸೌಹಾರ್ದತೆಗಳಿಗೆ ಪ್ರತೀಕ. ಅಂತರಗಂಗೆಯ ಕಾಶಿ ವಿಶ್ವೇಶ್ವರನ ದರ್ಶನ ಮತ್ತು ಪೂಜೆಗೆ ನಗರದ ಜನರಷ್ಟೇ ಅಲ್ಲ ಜಿಲ್ಲೆಯ ವಿವಿಧ ಭಾಗಗಳಿಂದ, ನೆರೆಯ ರಾಜ್ಯಗಳ ಭಕ್ತರೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು.
ನೂಕು ನುಗ್ಗಲು ನಿಯಂತ್ರಣ ಮತ್ತು ಸೂಕ್ತ ಬಂದೋಬಸ್ತ್ಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕೋಟೆ ಬಡಾವಣೆಯ ಪುರಾತನ ಸೋಮೇಶ್ವರ ದೇವಾಲಯವೂ ಭಕ್ತರ ವಿಶೇಷ ಆಕರ್ಷಣೆಯ ಕೇಂದ್ರವಾಗಿತ್ತು. ಕಠಾರಿಪಾಳ್ಯದ ಕುಂಬೇಶ್ವರ, ಅರಳೇಪೇಟೆಯ ಕಾಶಿ ವಿಶ್ವೇಶ್ವರ, ನಗರದ ಹೊರವಲಯದ ಚೊಕ್ಕಹಳ್ಳಿಯ ಸಾಂದೀಪನಿ ಆಶ್ರಮದ ಈಶ್ವರ ದೇವಾಲಯಗಳಲ್ಲೂ ಸಾಕಷ್ಟು ಭಕ್ತರು ಶ್ರದ್ಧೆ- ಭಕ್ತಿಯಿಂದ ಪಾಲ್ಗೊಂಡಿದ್ದರು. ಬೆಳಗಿನಿಂದ ಉಪವಾಸ, ರಾತ್ರಿಯ ಜಾಗರಣೆ ಪ್ರಯುಕ್ತ ಜನರು ಜಪ, ಮಂತ್ರಪಠಣದಲ್ಲಿ ತೊಡಗಿದ್ದರು.