ಕಡೂರು: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕೆಲವರು ಅಕ್ರಮವಾಗಿ ಕೋಳಿ ಮಾರಾಟ ಮಾಡುತ್ತಿದ್ದು, ಕೋಳಿ ಅಂಗಡಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸಂತೆ ಮೈದಾನದ ಕೋಳಿ ವ್ಯಾಪಾರಿಗಳು ಪುರಸಭೆ ಎದುರು ಕೋಳಿ ತ್ಯಾಜ್ಯ ಚೆಲ್ಲಿ ಪ್ರತಿಭಟಿಸಿದರು.ಪುರಸಭೆಯ ಆವರಣದಲ್ಲಿ ಬುಧವಾರ ಮುದಿಯಪ್ಪ ಮತ್ತು ಚಂದ್ರು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪುರಸಭೆ ಆಡಳಿತದ ವಿರುದ್ದ ಘೋಷಣೆ ಕೂಗಿದರು.
ಪಟ್ಟಣದ ಸ್ವಚ್ಚತೆಗಾಗಿ ಹಳೆ ಸಂತೆ ಮೈದಾನದಲ್ಲಿ ನಿರ್ಮಿಸಿರುವ ನೂತನ ಮಳಿಗೆಗೆ ಪಟ್ಟಣದ ಕೋಳಿ ಅಂಗಡಿಗಳನ್ನು ಸ್ಥಳಾಂತರಿಸಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗಿತ್ತು. ಆದರೆ ಏಕಾಏಕೀ ಕೆಲವರು ಪುನಃ ಪುರಸಭೆಯ ಮಂಭಾಗದಲ್ಲೇ ಕೋಳಿ ವ್ಯಾಪಾರದಲ್ಲಿ ತೊಡಗಿರುವುದರಿಂದ ಸಂತೆ ಮೈದಾನದ ಅಂಗಡಿಗಳ ವ್ಯಾಪಾರದಲ್ಲಿ ಕುಸಿತ ಕಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಡಾ.ವೈ.ಸಿ.ವಿಶ್ವನಾಥ್ ಇಂದು ನಡೆದ ಪುರಸಭೆ ಸಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದ್ದು, ಕೂಡಲೇ ಕೋಳಿ ಅಂಗಡಿಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದಾಗ ಪ್ರತಿಭಟನೆ ನಿಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಶ್ರೀಕಾಂತ್, ಆಂಥೋಣಿ, ಶ್ರೀಧರ್, ದರ್ಶನ್ ಇದ್ದರು.