ನಾಪೋಕ್ಲು: ಕೊಡವ ಪರಂಪರೆಯ ಲಾಂಛನವಾಗಿರುವ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬದುಕಿನ ಸಂಕೇತವಾಗಿರುವ ಕೋವಿಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತೋಕು ನಮ್ಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರತಿ ವರ್ಷವೂ ಇದನ್ನು ನಿರಂತರವಾಗಿ ನಡೆಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಹೇಳಿದರು.
ಸಮೀಪದ ಕೊಳಕೇರಿಯ ಕಾವೇರಿ ಎಸ್ಟೇಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಬುಧವಾರ ನಡೆದ ತೋಕು ನಮ್ಮೆ – ಗನ್ ಕಾರ್ನಿವಲ್ ಕಾರ್ಯಕ್ರಮದಲ್ಲಿ ಬಂದೂಕುಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕೊಡವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಲಾಂಛನವಾದ ಕೋವಿಯನ್ನು ಪಡೆಯುವುದು ಮಾತ್ರವಲ್ಲ, ಶಾಸನಬದ್ಧ ಹಕ್ಕಿನ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶ್ವ ಅಲ್ಪಸಂಖ್ಯಾತ ಜನಾಂಗದ ದಿನಾಚರಣೆ ಅಂಗವಾಗಿ ಈ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿ ಕುಟುಂಬದ ಪಟ್ಟೆದಾರರು ವರ್ಷಂಪ್ರತಿ 18 ವರ್ಷಕ್ಕೆ ಕಾಲಿಡುವ ಯುವಕ ಯುವತಿಯರಿಗೆ ಬಂದೂಕು ವಿನಾಯಿತಿ ದೃಢೀಕರಣ ಪತ್ರ ಪಡೆಯಲು ಸಹಕರಿಸುವುದು ಸೇರಿದಂತೆ ಒಂಬತ್ತು ನಿಯಮಗಳನ್ನು ಅಂಗೀಕರಿಸಲಾಯಿತು. ಇದಕ್ಕೂ ಮುನ್ನ ನಾಪೋಕ್ಲುವಿನ ಮಾರುಕಟ್ಟೆ ಆವರಣದಿಂದ ಸಾಂಸ್ಕೃತಿಕ ಮೆರವಣಿಗೆ ನಡೆಸಲಾಯಿತು.
ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಗಾಳಿಯಲ್ಲಿ ಗುಂಡು ಹೊಡೆಯುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕೊಳಕೇರಿಯ ಕಾವೇರಿ ಎಸ್ಟೇಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಕೊಡವತಿಯರಿಗೆ ಪ್ರತ್ಯೇಕವಾಗಿ ತೆಂಗಿನಕಾಯಿಗೆ ಗುಂಡು ಹಾರಿಸುವ ಪೈಪೋಟಿ ಏರ್ಪಡಿಸಲಾಗಿತ್ತು.
ನಾಪೋಕ್ಲು, ನೆಲಜಿ, ಕಕ್ಕಬ್ಬೆ, ಮತ್ತು ಕೊಳಕೇರಿಯ ಕೊಡವ ಸಮುದಾಯದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಪ್ಪಚ್ಚಿರ ರೆಮ್ಮಿ ನಾಣಯ್ಯ, ರೀನಾ ನಾಣಯ್ಯ ಇದ್ದರು.