ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಂದರ್ಭ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ- ಇಂಗ್ಲೆಂಡ್ ನಡುವಿನ ಪಂದ್ಯದ ಟಿಕೆಟ್ ಮಾರಾಟದ ವೇಳೆ ಸಾಕಷ್ಟು ಗೊಂದಲ ಉಂಟಾಗಿತ್ತು. ಟಿಕೆಟ್ಗಾಗಿ ಮುಗಿಬಿದ್ದ ಅಭಿಮಾನಿಗಳಿಗೆ ಪೊಲೀಸರ ಬೆತ್ತದ ಏಟು ಬಿದ್ದಿತ್ತು.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಡಿಸೆಂಬರ್ 25 ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್ ಪಂದ್ಯದ ವೇಳೆ ಅಂತಹ ಘಟನೆ ಪುನರಾವರ್ತನೆಯಾಗುವುದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಎಚ್ಚರಿಕೆ ವಹಿಸಿದೆ. ಮಾತ್ರವಲ್ಲ ಟಿಕೆಟ್ಗಳ ಎಲ್ಲ ವಿವರಗಳನ್ನು ಸಾರ್ವಜನಿಕರಿಗೆ ನೀಡಿದೆ.
`ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಂದರ್ಭ ಟಿಕೆಟ್ಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿತ್ತು. ಕೆಎಸ್ಸಿಎ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಅಂತಹ ಗೊಂದಲ ತಪ್ಪಿಸುವ ಉದ್ದೇಶದಿಂದ ಟಿಕೆಟ್ನ ಎಲ್ಲ ವಿವರಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ' ಎಂದು ಕೆಎಸ್ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯದ ಟಿಕೆಟ್ಗಳು ಸಾಮಾನ್ಯ ಜನರಿಗೆ ಆನ್ಲೈನ್ ಹಾಗೂ ಕ್ರೀಡಾಂಗಣದ ಕೌಂಟರ್ಗಳಲ್ಲಿ ಲಭ್ಯ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕೆಎಸ್ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದರು
ಡಿ. 21 ರಂದು ಕೌಂಟರ್ಗಳಲ್ಲಿ ಮಾರಾಟ: ಕ್ರೀಡಾಂಗಣದ ಕೌಂಟರ್ಗಳಲ್ಲಿ ಡಿಸೆಂಬರ್ 21 ರಂದು ಟಿಕೆಟ್ ಮಾರಾಟ ನಡೆಯಲಿದೆ. ಇಲ್ಲಿ ಲಭ್ಯವಿರುವುದು 5,500 ಟಿಕೆಟ್ಗಳು ಮಾತ್ರ. ಅದೇ ರೀತಿ ರೂ. 250 ಬೆಲೆಯ ಟಿಕೆಟ್ಗಳು ಮಾತ್ರ ದೊರೆಯಲಿದೆ.
ಆನ್ಲೈನ್ನಲ್ಲಿ ಇಂದಿನಿಂದ ಟಿಕೆಟ್
ಆನ್ಲೈನ್ ಮೂಲಕ ಪಂದ್ಯದ ಟಿಕೆಟ್ ಪಡೆಯುವವರು www.bookmyshow.com ವೆಬ್ಸೈಟ್ಗೆ ಭೇಟಿ ನೀಡಬಹುದು. ಡಿಸೆಂಬರ್ 13ರ (ಗುರುವಾರ) ಮಧ್ಯಾಹ್ನ 3.00 ಗಂಟೆಯಿಂದ ಟಿಕೆಟ್ಗಳು ದೊರೆಯಲಿವೆ. ಒಟ್ಟು 7,187 ಟಿಕೆಟ್ಗಳು ಲಭ್ಯ. 250 ರೂ. ಬೆಲೆಯ ಟಿಕೆಟ್ ಇಲ್ಲಿ ದೊರೆಯುವುದಿಲ್ಲ. ಆನ್ಲೈನ್ನಲ್ಲಿ ಕಾಯ್ದಿರಿಸಿದವರು ವೆಬ್ಸೈಟ್ನಲ್ಲಿ ಸೂಚಿಸಿದ ಸ್ಥಳಗಳಿಂದ ತಮ್ಮ ಟಿಕೆಟ್ ಸಂಗ್ರಹಿಸಬಹುದು. ಅಥವಾ ಮನೆಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ದೂರವಾಣಿ ಮೂಲಕವೂ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, 022-39895050 ಸಂಖ್ಯೆಗೆ ಕರೆ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.