ನಟ ಬಿ.ಸಿ. ಪಾಟೀಲ್ ‘ಕೌರವ’ನ ಅವತಾರಿಯಾಗಿ ದಶಕವೇ ದಾಟಿದ್ದರೂ ಆ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಮನೆ, ಶಿಕ್ಷಣ ಸಂಸ್ಥೆ ಮತ್ತು ಅವರು ನಡೆಸುವ ಪತ್ರಿಕೆಗೂ ‘ಕೌರವ’ನ ಹೆಸರಿದೆ. ಪ್ರಸ್ತುತ ಸಕ್ರಿಯ ರಾಜಕಾರಣದಿಂದ ಒಂದು ಅಂತರ ಕಾದುಕೊಂಡಿರುವ ಅವರು ಚಿತ್ರರಂಗದಲ್ಲಿ ಮರಳಿ ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ– ಅದೂ ಕೌರವನ ಮೂಲಕವೇ.
ಪಾಟೀಲರು ಇದೀಗ ಕೌರವ ಭಾಗ–2 ಚಿತ್ರ ನಿರ್ಮಾಣದ ಸಿದ್ಧತೆಯಲ್ಲಿದ್ದಾರೆ. ಛಲದೊಳ್ ದುರ್ಯೋಧನನಿಗೆ ಕಥೆ ಕೂಡಿಸುವ ಜವಾಬ್ದಾರಿಯನ್ನು ನಿರ್ದೇಶಕ ಎಸ್. ಮಹೇಂದರ್ ಹೊತ್ತುಕೊಂಡಿದ್ದಾರೆ. ಕಥೆ ಸಿದ್ಧಗೊಂಡ ತಕ್ಷಣವೇ ಚಿತ್ರೀಕರಣ ಆರಂಭ. ‘1993ರಲ್ಲಿ ‘ನಿಷ್ಕರ್ಷ’ ಸಿನಿಮಾದಿಂದ ಚಿತ್ರರಂಗದ ಜೊತೆ ನಂಟು ಬೆಸೆದುಕೊಂಡೆ.