ಬೆಂಗಳೂರು: `ಭವಿಷ್ಯದ ಬಲಿಷ್ಠ ಭಾರತವನ್ನು ನಿರ್ಮಿಸಬೇಕಾದರೆ ಶಿಕ್ಷಣ ನೀಡುವುದನ್ನು ಮುಖ್ಯ ಆದ್ಯತೆಯನ್ನಾಗಿ ಮಾಡಿಕೊಳ್ಳಬೇಕು~ ಎಂದು ಪ್ರಧಾನಮಂತ್ರಿಗಳ ಸಲಹೆಗಾರ (ರಾಷ್ಟ್ರೀಯ ಕೌಶಲ ಅಭಿವೃದ್ಧಿ) ಹಾಗೂ `ಟಾಟಾ ಕನ್ಸಲ್ಟೆನ್ಸಿ ಸರ್ವಿ ಸಸ್~ನ (ಟಿಸಿಎಸ್) ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎಸ್.ರಾಮದೊರೈ ಅವರು ಅಭಿಪ್ರಾಯಪಟ್ಟರು.
ನಗರದಲ್ಲಿ ಶುಕ್ರವಾರ ಪೆಂಗ್ವಿನ್ ಪ್ರಕಾಶನದ ತಮ್ಮ `ದಿ ಟಿಸಿಎಸ್ ಸ್ಟೋರಿ... ಅಂಡ್ ಬಿಯಾಂಡ್~ ಕೃತಿ ಬಿಡುಗಡೆ ಸಮಾರಂಭದಲ್ಲಿ ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, `ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಿಂದಲೇ ಕೌಶಲ ತರಬೇತಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ಆ ಮೂಲಕ ಶಿಕ್ಷಣವನ್ನು ಔದ್ಯಮಿಕ ದೃಷ್ಟಿಕೋನದಿಂದ ನೋಡಬೇಕಾಗಿದೆ~ ಎಂದು ಅವರು ಪ್ರತಿಪಾದಿಸಿದರು.
`1970ರ ದಶಕದಲ್ಲಿ ಮಾಹಿತಿ ತಂತ್ರಜ್ಞಾನ ಎಂಬುದು ಭಾರತದಲ್ಲಿ ಮರೀಚಿಕೆಯಾಗಿತ್ತು. ಟಿಸಿಎಸ್ ಬಗ್ಗೆ ಆಗ ಯಾರಿಗೂ ತಿಳಿದಿರಲಿಲ್ಲ. ಅಲ್ಲದೇ ಸಂಸ್ಥೆಯ ಬೆಳವಣಿಗೆ ಕುರಿತು ಸಂದೇಹ ಪಡುವವರೂ ಇದ್ದರು. ಅಂದಿನಿಂದ ಮಾಹಿತಿ ತಂತ್ರಜ್ಞಾನದ ಸಾಧ್ಯತೆಗಳನ್ನು ದೇಶಕ್ಕೆ ತಿಳಿಸಲು ನಿರ್ಧರಿಸಿದೆ. ಇಂದು ಸಂಸ್ಥೆಯು ಭಾರತದ ಪ್ರಮುಖ 10 ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಸಿಬ್ಬಂದಿಯ ಶ್ರಮದಿಂದ. ಈ ಕೃತಿಯು ಬರೀ ಸಂಸ್ಥೆಯ ಕಥೆಯನ್ನು ಮಾತ್ರ ಹೇಳುವುದಿಲ್ಲ. ಇದರೊಟ್ಟಿಗೆ ದೇಶದಲ್ಲಾದ ತಂತ್ರಜ್ಞಾನದ ಬೆಳವಣಿಗೆಯನ್ನೂ ತಿಳಿಸುತ್ತದೆ~ ಎಂದು ಹೇಳಿದರು.
`ಈ ಕೃತಿ ಮಾರಾಟದಿಂದ ಬಂದ ಹಣವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸಲಾಗುವುದು~ ಎಂದು ಘೋಷಿಸಿದರು.
ಕೃತಿ ಬಿಡುಗಡೆ ಮಾಡಿದ ಬ್ರಿಟಾನಿಯಾ ಇಂಡಸ್ಟ್ರೀಸ್ನ ವ್ಯವಸ್ಥಾಪಕ ನಿರ್ದೇಶಕಿ ವಿನಿತಾ ಬಾಲಿ ಮಾತನಾಡಿ, `ಟಿಸಿಎಸ್ ಸಂಸ್ಥೆಯ ಇಂದಿನ ಬಂಡವಾಳ 44 ಶತಕೋಟಿ ಡಾಲರ್ಗಳಾಗಿದ್ದು, ಸಂಸ್ಥೆಯ ಈ ಬೆಳವಣಿಗೆಗೆ ರಾಮದೊರೈ ಅವರ ಶ್ರಮವೇ ಕಾರಣ~ ಎಂದು ಶ್ಲಾಘಿಸಿದರು.