ಬೆಂಗಳೂರು: `ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಬೆಳೆಸಿಕೊಂಡು, ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಲು ಶ್ರಮಿಸಬೇಕು' ಎಂದು ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಶ್ರೀಕೃಷ್ಣ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶನಿವಾರ ನಡೆದ ಎಲ್ಕೆಜಿಯಿಂದ ಎಸ್ಸೆಸ್ಸೆಲ್ಸಿ ವರೆಗಿನ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
`ವಿದ್ಯಾರ್ಥಿಗಳು ಜೀವನದ ಗತಿಯನ್ನೇ ಬದಲಿಸುವಂತವರಾಗಬೇಕು. ಪ್ರತಿಭೆ ಉನ್ನತಿಗೆ ಮಾತ್ರ ಬಳಕೆಯಾಗದೆ, ದೇಶದ ಅಭಿವೃದ್ಧಿಗೆ ಬಳಸಬೇಕು. ಹೆಚ್ಚಿನ ಜ್ಞಾನ ಸಂಪಾದನೆಗೆ ವಿದೇಶಗಳಿಗೆ ಹೋದ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿ ಈ ನಾಡಿನಲ್ಲಿಯೇ ತಮ್ಮ ಸೇವೆಯನ್ನು ಸಲ್ಲಿಸಬೇಕು' ಎಂದರು.
ಶ್ರೀಕೃಷ್ಣ ಇಂಟರ್ನ್ಯಾಷನಲ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ರುಕ್ಮಾಂಗದ ನಾಯ್ಡು ಮಾತನಾಡಿ, `ಮನುಷ್ಯನಿಗೆ ಬುದ್ಧಿ ಒಂದಿದ್ದರೆ ಸಾಲದು. ಸಾಮಾನ್ಯ ಜ್ಞಾನವೂ ಅಗತ್ಯವಾಗಿದೆ. ತಾವು ಸಾಧಿಸಿದ ಸಾಧನೆಯನ್ನು ತಲೆಗೆ ಏರಿಸಿಕೊಂಡವರು ಬದುಕಿನಲ್ಲಿ ಏನು ಸಾಧಿಸಲಾರರು' ಎಂದರು.
`ಕಾಲೇಜು ಜೀವನ ಮುಗಿದ ತಕ್ಷಣವೇ ನಿಜವಾದ ಜೀವನ ಆರಂಭವಾಗುತ್ತದೆ. ಆಗ ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗುತ್ತವೆ' ಎಂದು ಹೇಳಿದರು.