ಭಾರತಿ ಎಂಟರ್ಪ್ರೈಸಸ್ ಮತ್ತು ವಾಲ್ಮಾರ್ಟ್ ಪಾಲುದಾರಿಕೆಯ ಭಾರತಿ ವಾಲ್ಮಾರ್ಟ್ ಈಗ ಬೆಂಗಳೂರಿನಲ್ಲಿ ಕರ್ನಾಟಕ ಉದ್ಯೋಗ ತರಬೇತಿ ನಿರ್ದೇಶನಾಲಯ ಮತ್ತು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ (ಕೆವಿಟಿಎಸ್ಡಿಸಿ) ಸಹಯೋಗದಲ್ಲಿ ಭಾರತಿ ವಾಲ್ಮಾರ್ಟ್ ಕೌಶಲ್ಯ ಕೇಂದ್ರ ತೆರೆದಿದೆ.
ಪೀಣ್ಯದ ಸರ್ಕಾರಿ ಐಐಟಿಯಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಈ ಸಂಬಂಧ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ, ಇಲ್ಲಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ರಿಟೇಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯವಾದ ಉಚಿತ ತರಬೇತಿ ನೀಡಲಾಗುತ್ತದೆ.
ತಿಂಗಳಿಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸೌಲಭ್ಯ ಇಲ್ಲಿದೆ. ಶೇ 100ರಷ್ಟು ಶಿಷ್ಯವೇತನ ದೊರೆಯಲಿದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಭಾರತಿ ವಾಲ್ಮಾರ್ಟ್ ಪ್ರಮಾಣಪತ್ರ ನೀಡಲಿದೆ. ಈ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವಂತೆಯೂ ಪ್ರಯತ್ನಿಸಲಾಗುತ್ತದೆ.
ಸೇವಾಕ್ಷೇತ್ರ ವ್ಯಾಪಕವಾಗಿ ಅತ್ಯಾಧುನಿಕವಾಗಿ ವಿಕಸನಗೊಳ್ಳುತ್ತಿರುವ ಸಂದರ್ಭದಲ್ಲಿ ಇಂದು ಪೈಪೋಟಿಗೆ ಅರ್ಹರಾಗಿ ಅಂತರರಾಷ್ಟ್ರೀಯ ಮಾನದಂಡಗಳಿಗೆ ಪೂರಕವಾಗಿ ತರಬೇತಿ ನೀಡುವ ಕ್ರಮ ಇದು ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಎಸ್.ಆರ್. ಉಮಾಶಂಕರ್ ಹೇಳುತ್ತಾರೆ.
ವಾಲ್ಮಾರ್ಟ್ ಇಂಡಿಯಾ ಅಧ್ಯಕ್ಷ ಹಾಗೂ ಭಾರತಿ ವಾಲ್ಮಾರ್ಟ್ನ ಮುಖ್ಯಸ್ಥ ರಾಜ್ ಜೈನ್ ಅವರ ಪ್ರಕಾರ ಕೇವಲ ಎರಡು ಮೂರು ವಾರಗಳ ಅಲ್ಪಾವಧಿಯಲ್ಲಿ ರಿಟೇಲ್ ಕ್ಷೇತ್ರದ ಕೆಲಸಕ್ಕೆ ಅಣಿಗೊಳಿಸುವಂತಹ ತರಬೇತಿ ಇದು.
ಉದ್ಘಾಟನಾ ಸಮಾರಂಭದಲ್ಲಿ ಕಾರ್ಮಿಕ ಸಚಿವ ಬಚ್ಚೇಗೌಡ, ಕೌಶಲ್ಯ ಅಭಿವೃದ್ಧಿ ನಿಗಮದ ಎಂಡಿ ವಿಷ್ಣುಕಾಂತ ಚಟ್ಪಲ್ಲಿ ಕೂಡ ಹಾಜರಿದ್ದರು.