ಮಾರಕ ರೋಗಗಳ ಸಂಶೋಧನೆಗೆ ನಿಧಿ ಸಂಗ್ರಹ ಮಾಡಲು ವಿದೇಶದಲ್ಲಿರುವ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿವೆ. ಇಂಥವುಗಳ ಪಟ್ಟಿಯಲ್ಲಿ ಕೆನಡಾ ಮೂಲದ ಟೆರಿಫಾಕ್ಸ್ ರನ್ ಸೇವಾ ಸಂಸ್ಥೆ ಸಹ ಒಂದು.
ಪ್ರಪಂಚದಾದ್ಯಂತ ಕ್ಯಾನ್ಸರ್ ಪೀಡಿತರ ನೆರವಿಗಾಗಿ ಸಹಾಯ ಹಸ್ತ ಚಾಚಿರುವ ಈ ಸಂಸ್ಥೆ ಮತ್ತಷ್ಟು ಸಹಾಯ ಮಾಡಲಿಚ್ಛಿಸಿರುವ ಸಹೃದಯರನ್ನು ನಿರೀಕ್ಷಿಸುತ್ತಿದೆ. ಈ ನಿಟ್ಟಿನಲ್ಲಿ ಭಾನುವಾರ ಮ್ಯಾರಥಾನ್ ಆಯೋಜಿಸಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿರುವ ನಾಲ್ಕು ಕಿ.ಮೀಗಳ ಮ್ಯಾರಥಾನ್ಗೆ ನಟ ರಮೇಶ್ ಅರವಿಂದ್ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕೆನಡಾದ ಕಾನ್ಸುಲ್ ಜನರಲ್ ಶಾನ್ ವೆಡಿಕ್, ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ, ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ, ಸಂಸ್ಥೆಯ ಮುಖ್ಯಸ್ಥೆ ಅನುಪಮಾ ಮೊಂಗ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಕ್ಯಾನ್ಸರ್ ಪೀಡಿತರಿಗೆ ನೆರವು ನೀಡಲಿಚ್ಛಿಸುವವರು ಚೆಕ್ ಅಥವಾ ನಗದನ್ನು ಹೆಸರು ನೊಂದಾಯಿಸುವ ವೇಳೆ ನೀಡಬಹುದು. ಸಂಗ್ರಹವಾದ ಹಣವನ್ನು ಕ್ಯಾನ್ಸರ್ ರೋಗದ ಸಂಶೋಧನೆಗಾಗಿ ಟಾಟಾ ಸ್ಮಾರಕ ಆಸ್ಪತ್ರೆಗೆ ನೀಡಲು ಉದ್ದೇಶಿಸಲಾಗಿದೆ.
ಮಾಹಿತಿಗೆ: ನಿತಿನ್ ತೊಲಾನಿ (99010 90581, 2846 5060).