ಕರಾಚಿ, (ಪಿಟಿಐ): ಶ್ರೀಲಂಕಾ ಕ್ರಿಕೆಟ್ ಆಟಗಾರರನ್ನು ಒತ್ತೆಯಾಳಾಗಿರಿಸುವ ಮೂಲಕ ಬಂಧಿಸಲ್ಪಟ್ಟಿರುವ ತಮ್ಮ ಕೆಲವು ಸಹಚರರನ್ನು ಬಿಡುಗಡೆ ಗೊಳಿಸುವಂತೆ ಬೇಡಿಕೆ ಒಡ್ಡಲು ತನ್ನ ಸಂಘಟನೆಯಾದ ಲಷ್ಕರ್-ಎ-ಜಾಂಗ್ವಿ (ಎಲ್ಎಜೆ) ಉದ್ದೇಶ ಹೊಂದಿತ್ತು ಎಂದು ಅಬ್ದುಲ್ ವಹಾಬ್ ಅಲಿಯಾಸ್ ಒಮರ್ ತಿಳಿಸಿದ್ದಾನೆ.
2009ರಲ್ಲಿ ಲಾಹೋರ್ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆಸಲಾದ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿಯಾಗಿರುವ ಈತ ಹೇಳಿಕೆಯೊಂದನ್ನು ನೀಡಿ ದಾಳಿಯ ಸಂಚನ್ನು ವಜಿರಿಸ್ತಾನ್ದಲ್ಲಿ ಹೂಡ ಲಾಗಿತ್ತು ಎಂದಿದ್ದಾನೆ.
‘ದಾಳಿಯ ಸಂಚನ್ನು ಕಾರ್ಯರೂಪಕ್ಕೆ ತರಲು 12 ಮಂದಿಯನ್ನು ನಿಯೋಜಿಸಲಾಗಿತ್ತು. ತಾನು ಲಷ್ಕರ್-ಎ-ಜಾಂಗ್ವಿ ಅಜ್ಮದ್ ಫರೂಕಿ ಗುಂಪಿಗೆ ಸೇರಿದವನು’ ಎಂದೂ ಆತ ತಿಳಿಸಿದ್ದಾನೆ. ‘ಶ್ರೀಲಂಕಾ ತಂಡ ಆಗಮಿಸುವ ಕೆಲವೇ ಕ್ಷಣಗಳ ಮುನ್ನ ನಾವು ಅಲ್ಲಿಗೆ ಆಗಮಿಸಿದೆವು. ಇದಕ್ಕೆಂದೇ ನಾವು ಆಟೋ ಮತ್ತು ಮೋಟಾರ್ ಸೈಕಲ್ಗಳನ್ನು ಖರೀದಿಸಿದ್ದೆವು’ ಎಂದು ಮಾಹಿತಿ ನೀಡಿದ್ದಾನೆ.