ಚೆನ್ನೈ (ಐಎಎನ್ಎಸ್): ಭಾರತ ಟ್ವೆಂಟಿ-20 ತಂಡಕ್ಕೆ ಹಿಂದಿರುಗಿರುವ ರಾಬಿನ್ ಉತ್ತಪ್ಪ (59; 29 ಎಸೆತ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಸೋಲಿಸಿದ್ದಾರೆ.
ಮಂಗಳವಾರ ನಡೆದ ಈ ಪಂದ್ಯದಲ್ಲಿ ತಮಿಳುನಾಡು ನೀಡಿದ 132 ರನ್ಗಳ ಗುರಿಯನ್ನು ಕರ್ನಾಟಕ 16.5 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು. ಕರ್ನಾಟಕಕ್ಕೆ ಲಭಿಸುತ್ತಿರುವ ಮೂರನೇ ಗೆಲುವು ಇದಾಗಿದೆ. ಈ ಮೊದಲು ಗೋವಾ ಹಾಗೂ ಕೇರಳ ಎದುರು ಗೆಲುವು ಸಾಧಿಸಿದ್ದರು.
ರಾಬಿನ್ ಅವರ ಇನಿಂಗ್ಸ್ನಲ್ಲಿ ಮೂರು ಭರ್ಜರಿ ಸಿಕ್ಸರ್ಗಳು ಹಾಗೂ ಏಳು ಬೌಂಡರಿಗಳಿದ್ದವು. ಮಯಾಂಕ್ ಅಗರ್ವಾಲ್ (15) ಮೊದಲ ವಿಕೆಟ್ಗೆ 46 ಎಸೆತಗಳಲ್ಲಿ ಜೊತೆ 77 ರನ್ ಸೇರಿಸಿದರು. ಭರತ್ ಚಿಪ್ಲಿ (ಔಟಾಗದೆ 38; 29 ಎಸೆತ) ಕೂಡ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.
ಇದಕ್ಕೂ ಮೊದಲು ಬೌಲಿಂಗ್ನಲ್ಲಿ ಕರ್ನಾಟಕ ತಂಡದ ಸ್ಟುವರ್ಟ್ ಬಿನ್ನಿ (17ಕ್ಕೆ3) ಹಾಗೂ ಕೆ.ಪಿ.ಅಪ್ಪಣ್ಣ (27ಕ್ಕೆ2) ಮಿಂಚಿದ್ದರು.
ಸಂಕ್ಷಿಪ್ತ ಸ್ಕೋರ್: ತಮಿಳುನಾಡು: 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 (ದಿನೇಶ್ ಕಾರ್ತಿಕ್ 52, ಶ್ರೀವಾಸುದೇವದಾಸ್ ಔಟಾಗದೆ 30; ಸ್ಟುವರ್ಟ್ ಬಿನ್ನಿ 17ಕ್ಕೆ3, ಕೆ.ಪಿ.ಅಪ್ಪಣ್ಣ 27ಕ್ಕೆ2);
ಕರ್ನಾಟಕ: 16.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 135 (ರಾಬಿನ್ ಉತ್ತಪ್ಪ 59, ಭರತ್ ಚಿಪ್ಲಿ ಔಟಾಗದೆ 38, ಗಣೇಶ್ ಸತೀಶ್ ಔಟಾಗದೆ 18): ಫಲಿತಾಂಶ: ಕರ್ನಾಟಕಕ್ಕೆ ಎಂಟು ವಿಕೆಟ್ ಗೆಲುವು.