ಕೋಲ್ಕತ್ತ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಬಂಗಾಳ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡದ ನಾಯಕರಾಗಿದ್ದ ಮನೋಜ್ ತಿವಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಕಾರಣ ಗಂಗೂಲಿಗೆ ಈ ಜವಾಬ್ದಾರಿ ಲಭಿಸಿದೆ. ಉಪ ನಾಯಕನ ಹೆಸರನ್ನು ಆಯ್ಕೆ ಸಮಿತಿ ಇನ್ನೂ ಪ್ರಕಟಿಸಿಲ್ಲ. ಫೆಬ್ರುವರಿ 20ರಿಂದ 28ರ ವರೆಗೆ ನಡೆಯಲಿರುವ ವಲಯ ಮಟ್ಟದ ಲೀಗ್ ಟೂರ್ನಿಯಲ್ಲಿ ಬಂಗಾಳ ಎದುರು ಒಡಿಶಾ ಆಡಲಿದೆ. ಈ ವರ್ಷದ ರಣಜಿ ಋತುವಿನಲ್ಲಿ ಮಾಜಿ ನಾಯಕ ಮೂರು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
ರಾಜ್ಯ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ದೀಪ್ ದಾಸಗುಪ್ತ ತಂಡದ ಆಯ್ಕೆ ಪಟ್ಟಿಯನ್ನು ಶನಿವಾರ ಪ್ರಕಟಿಸಿದರು. ಐಪಿಎಲ್ ಐದನೇ ಆವೃತ್ತಿಯಲ್ಲಿ `ದಾದಾ~ ಪುಣೆ ವಾರಿಯರ್ಸ್ ತಂಡದ ನಾಯಕರಾಗಿದ್ದಾರೆ. ಅಂತರರಾಷ್ಟ್ರೀಯ ಆಟಗಾರ ವೃದ್ಧಿಮಾನ್ ಸಹಾ ತಂಡದಲ್ಲಿದ್ದಾರೆ.