ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಹೆಣ್ಣೂರು ಮುಖ್ಯರಸ್ತೆಯ ಗೆದ್ದಲಹಳ್ಳಿಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.ಎಚ್ಎಸ್ಆರ್ ಲೇಔಟ್ನ ಕೆ.ಎಸ್.ಮಣಿಯನ್ (52), ರವಿ (23), ಎಚ್ಎಎಲ್ ಎರಡನೇ ಹಂತದ ಎನ್.ವಿಕಾಸ್ (40) ಮತ್ತು ಅಭಿ (21) ಬಂಧಿತರು. ಆರೋಪಿಗಳಿಂದ 7.15 ಲಕ್ಷ ನಗದು, ಕಾರು, ಟಿ.ವಿ, ಲ್ಯಾಪ್ಟಾಪ್ ಹಾಗೂ ಮೊಬೈಲ್ ಫೋನ್ಗಳು ಸೇರಿದಂತೆ 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ಕ್ರಿಕೆಟ್ ಪಂದ್ಯದ ಮೇಲೆ ಆರೋಪಿಗಳು ಗೆದ್ದಲಹಳ್ಳಿಯ ಮನೆಯೊಂದರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಆ ಮನೆ ಮೇಲೆ ದಾಳಿ ನಡೆಸಲಾಯಿತು. ಅವರೊಂದಿಗೆ ವ್ಯವಹರಿಸುತ್ತಿದ್ದ ಅಕ್ಕಿಪೇಟೆ ಬಾಬು, ಶಿಬು, ರಾಜೇಶ, ನರಹರಿ ಅಲಿಯಾಸ್ ಬೆನಕ, ಶಾಂತಿಲಾಲ್, ಮೋಂಗಿ, ರಾಹುಲ್, ಅಜಯ್, ನಾರಾಯಣ, ನಂಜಪ್ಪ, ವಿಮಲ್ ಎಂಬುವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ವರ್ಷಗಳಿಂದ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಅವರು ಸಂಪರ್ಕ ಜಾಲವನ್ನು ವಿಸ್ತರಿಸಿಕೊಂಡಿದ್ದರು. 70 ಪೈಸೆ : ರೂ 1ರ ಅನುಪಾತದಲ್ಲಿ ಆರಂಭವಾಗುತ್ತಿದ್ದ ಬೆಟ್ಟಿಂಗ್ ಮೊತ್ತದ ಪ್ರಮಾಣ ಪಂದ್ಯ ಮುಂದುವರೆದಂತೆ ಹೆಚ್ಚಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.