ಜೋಹಾನ್ಸ್ಬರ್ಗ್ (ಪಿಟಿಐ): ಭಾರತ ತಂಡ ಗುರುವಾರ ಇಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ಆರಂಭಿಸಿದೆ. ಸೋಮವಾರ ದಕ್ಷಿಣ ಆಫ್ರಿಕಾ ತಲುಪಿದ ಭಾರತ ತಂಡದ ಆಟಗಾರರು ಸ್ಥಳೀಯ ಹೊಟೇಲ್ನಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದರು. ನಂತರ ಅಲ್ಲಿಂದ ನೇರವಾಗಿ ಅಭ್ಯಾಸಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಮುಂದಾದರು.
ಸಚಿನ್ ತೆಂಡೂಲ್ಕರ್ ನಿವೃತ್ತಿಯ ನಂತರ ಭಾರತ ಪಾಲ್ಗೊಳ್ಳುತ್ತಿರುವ ಮೊದಲ ಸರಣಿ ಇದಾಗಿದ್ದು, ದ.ಆಫ್ರಿಕಾ ಪ್ರವಾಸದಲ್ಲಿರುವ ತಂಡದಲ್ಲಿ ಅನನುಭವಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ದ.ಆಫ್ರಿಕಾ ಬ್ಯಾಟ್ಸ್ಮನ್ಗಳು ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ ಭಾರತ ಕೂಡ ಸರಣಿ ಜಯಿಸುವ ಕನಸು ಕಾಣುತ್ತಿದೆ.