ಬೆಂಗಳೂರು: ರಾಜ್ಯದ ಏಳು ಮಹಾನಗರ ಪಾಲಿಕೆಗಳು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ 13ನೇ ಹಣಕಾಸು ಆಯೋಗದ ಅನುದಾನದಡಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದರು.
ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ. 2013-14 ಹಾಗೂ 2014-15ನೇ ಸಾಲಿನ ಕ್ರಿಯಾಯೋಜನೆಗಳನ್ನು ಅನುಮೋದಿಸುವ ಅಧಿಕಾರವನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕ್ರಿಯಾ ಯೋಜನೆಯನ್ನು ಮಾತ್ರ ಸರ್ಕಾರವೇ ಅನುಮೋದಿಸಲಿದೆ ಎಂದರು.
ಇದುವರೆಗೂ 13ನೇ ಹಣಕಾಸು ಆಯೋಗದ ಸಾಮಾನ್ಯ ಅನುದಾನದ ಕ್ರಿಯಾಯೋಜನೆಗಳಿಗೆ ಪೌರಾಡಳಿತ ಇಲಾಖೆಯ ಆಯುಕ್ತರು ಅನುಮೋದನೆ ನೀಡುತ್ತಿದ್ದರು.
ಪ್ರತಿಯೊಂದು ಪಾಲಿಕೆಯಿಂದ ಕ್ರಿಯಾಯೋಜನೆಗಳು ಆಯುಕ್ತರ ಬಳಿ ಬಂದು ಅನುಮೋದನೆ ಪಡೆಯಲು ಸಾಕಷ್ಟು ಸಮಯ ಹಿಡಿಯುತ್ತಿತ್ತು.
ಈಗ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿರುವುದರಿಂದ ಕೆಲಸಗಳು ವೇಗವಾಗಿ ಸಾಗುವ ವಿಶ್ವಾಸ ಇದೆ ಎಂದರು.