ಬೆಳ್ತಂಗಡಿ: ನಿರಂತರ ಪ್ರಯೋಗಶೀಲತೆ ಮತ್ತು ಸದಾ ಕ್ರಿಯಾಶೀಲರಾಗಿದ್ದಾಗ ಮಾತ್ರ ಸಹೃದಯ ಕಲಾಭಿಮಾನಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಬೆಳ್ತಂಗಡಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಸಹಜವಾದ ಸಂದರ್ಭಗಳು, ಸನ್ನಿವೇಶ ಮತ್ತು ಪಾತ್ರಗಳಿದ್ದಾಗ ಮಾತ್ರ ಸಿನಿಮಾರಂಗ ರಸಿಕರನ್ನು ಸಹೃದಯ ಪ್ರೇಕ್ಷಕರನ್ನಾಗಿ ಆಕರ್ಷಿಸಲು ಸಾಧ್ಯವಾಗುತ್ತದೆ. ಭಾರತದ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜೀವನಶೈಲಿ ವಿಶ್ವದ ಗಮನವನ್ನೇ ಸೆಳೆದಿದೆ ಎಂದು ಅವರು ತಿಳಿಸಿದರು.
ಡಾ. ಎಚ್.ಎಸ್ ಅನುಪಮಾ, ಜಲಜ, ಬಾಬು ಪೂಜಾರಿ, ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಲೇಖಕ ಕೆ.ಟಿ ಗಟ್ಟಿ ಮಾತನಾಡಿ ತನ್ನ ಇಥಿಯೋಪಿಯಾ ದೇಶದ ಒಂಭತ್ತು ವರ್ಷಗಳ ಜೀವನಾನುಭವವನ್ನು ವಿವರಿಸಿದರು. ಪತ್ರಕರ್ತ ಲಕ್ಷ್ಮಿ ಮಚ್ಚಿನ ಅವರು ಬರೆದ ‘ಅಂಡಮಾನ್ ಅಂಡಮಾನ್’ ಪ್ರವಾಸ ಕಥನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.