ಕಿಂಗ್ಸ್ಟನ್, ಜಮೈಕ (ಪಿಟಿಐ): ಕ್ರಿಸ್ ಗೇಲ್ ಅವರೊಂದಿಗಿನ ವಿವಾದ ಬಗೆಹರಿಸಲು ಪ್ರಯತ್ನ ಮುಂದುವರಿಸುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯುಐಸಿಬಿ) ಹೇಳಿದೆ. ಆದರೆ ವೆಸ್ಟ್ ಇಂಡೀಸ್ ಆಟಗಾರರ ಸಂಘದ ಮುಖ್ಯಸ್ಥ ದೀನಾನಾಥ್ ರಾಮನಾರಾಯಣ ಅವರೊಂದಿಗಿನ ಸಂಬಂಧವನ್ನು ಕಡಿದುಹಾಕಲು ನಿರ್ಧರಿಸಿದೆ.
ವಿಂಡೀಸ್ ಮಂಡಳಿಯನ್ನು ಟೀಕಿಸಿದ್ದ ಕಾರಣ ಗೇಲ್ ಕೆರಿಬಿಯನ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ತಮ್ಮ ವರ್ತನೆಯ ಬಗ್ಗೆ ಕ್ಷಮೆಯಾಚಿಸಲು ಮುಂದಾಗದ ಕಾರಣ ಗೇಲ್ ಹಾಗೂ ಮಂಡಳಿಯ ಜೊತೆಗಿನ ಸಂಬಂಧ ಹಳಸಿದೆ. ಇಬ್ಬರ ನಡುವೆ ಈಗಾಗಲೇ ಹಲವು ಸಲ ಮಾತುಕತೆ ನಡೆದಿದೆಯಾದರೂ, ವಿವಾದಕ್ಕೆ ತೆರೆಬಿದ್ದಿಲ್ಲ.
ಭಾರತ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಸರಣಿಗೆ ಗೇಲ್ ಅವರನ್ನು ಕಡೆಗಣಿಸಲಾಗಿದೆ. ಆದರೂ ಅವರ ಜೊತೆಗಿನ ವಿವಾದಕ್ಕೆ ತೆರೆ ಎಳೆಯಲು ಇನ್ನೂ ಪ್ರಯತ್ನ ಮಾಡುವುದಾಗಿ ಮಂಡಳಿ ಹೇಳಿದೆ.
`ಆಟಗಾರರ ಸಂಘದ ಮುಖ್ಯಸ್ಥ ರಾಮನಾರಾಯಣ ತಮ್ಮ ವರ್ತನೆಯಲ್ಲಿ ಬದಲಾವಣೆ ತರಬೇಕು. ಅಲ್ಲಿವರೆಗೆ ಅವರ ಜೊತೆ ಯಾವುದೇ ಸಂವಹನಕ್ಕೆ ಮುಂದಾಗುವುದಿಲ್ಲ~ ಎಂದು ಡಬ್ಲ್ಯುಐಸಿಬಿ ತಿಳಿಸಿದೆ.
ಮಂಡಳಿಯ ವರ್ತನೆಯಿಂದ ಬೇಸತ್ತಿರುವ ಗೇಲ್ ದೇಶದ ತಂಡ ತೊರೆದು ಬೇರೆಡೆ ತೆರಳು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.